ಗುಳಗೊಂಡನಹಳ್ಳಿ (ಹಿರಿಯೂರು): ಬೀದರ್ ಜಿಲ್ಲೆಯ ರೈತರಿಂದ ಖರೀದಿ ಸಿದ್ದ ಟೊಮೆಟೊವನ್ನು ಲಾರಿಯಲ್ಲಿ ಒಯ್ಯು
ತ್ತಿದ್ದ ವರ್ತಕರೊಬ್ಬರು ದರ ಪಾತಾಳಕ್ಕೆ ಕುಸಿದ ಮಾಹಿತಿ ತಿಳಿದುಹಿರಿಯೂರು ಸಮೀಪ ಟೊಮೆಟೊವನ್ನು ರಸ್ತೆಗೆ ಚೆಲ್ಲಿದರು. ಇನ್ನೊಂದೆಡೆ ಗುಳಗೊಂಡನಹಳ್ಳಿ ರೈತರೊಬ್ಬರು ಎರಡು ಎಕರೆಯಲ್ಲಿ ಬೆಳೆದಿದ್ದ ಟೊಮೆಟೊವನ್ನು ರಸ್ತೆಗೆ ಸುರಿದರು.
ಬೆಂಗಳೂರಿಗೆ ಟೊಮೆಟೊ ಒಯ್ಯು ತ್ತಿದ್ದ ವ್ಯಾಪಾರಿ ಅವಿನಾಶ್ ದರ ಕುಸಿತದ ಮಾಹಿತಿ ತಿಳಿಯುತ್ತಿದ್ದಂತೆ, ಬೀದರ್–ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ಗುಳಗೊಂಡನಹಳ್ಳಿ ಬಳಿ 120 ಬಾಕ್ಸ್ಗಳಲ್ಲಿದ್ದ ಟೊಮೆಟೊವನ್ನು ರಸ್ತೆಗೆ ಸುರಿದಿದ್ದಾರೆ. ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.
‘ಬಾಕ್ಸ್ ಟೊಮೆಟೊಗೆ ₹50 ರಂತೆ ಖರೀದಿಸಿದ್ದೇನೆ. ಬೀದರ್ನಿಂದ ಬೆಂಗಳೂರಿಗೆ ಒಂದು ಬಾಕ್ಸ್ ಸಾಗಣೆಗೆ ₹100 ಬಾಡಿಗೆ ಕೊಡಬೇಕು. ಲಾರಿ ಬಾಡಿಗೆ ₹ 42 ಸಾವಿರ ಕೊಡಬೇಕಿದೆ. ಬೆಂಗಳೂರಿಗೆ ಒಯ್ದರೆ ಅರ್ಧ ಬಾಡಿಗೆಯೂ ಬರುವುದಿಲ್ಲ. ಹೀಗಾಗಿ ಇಲ್ಲಿಯೇ ಸುರಿದಿದ್ದೇನೆ’ ಎಂದು ಅವಿನಾಶ್ ಅಳಲು ತೋಡಿಕೊಂಡರು.
ಗುಳಗೊಂಡನಹಳ್ಳಿಯ ರೈತ ಗುರುಸ್ವಾಮಿ ಬೆಲೆ ಕುಸಿತದಿಂದ 3 ಕ್ವಿಂಟಲ್ ಟೊಮೆಟೊವನ್ನು ಬೀದರ್–ಶ್ರೀರಂಗಪಟ್ಟಣ ಹೆದ್ದಾರಿ ಬದಿಯಲ್ಲಿ ಸುರಿದಿದ್ದಾರೆ.
‘ಎರಡು ಎಕರೆಯಲ್ಲಿ ₹ 1.20 ಲಕ್ಷ ಖರ್ಚು ಮಾಡಿ ಟೊಮೆಟೊ ಬೆಳೆದಿದ್ದೆ. ಹಿರಿಯೂರು ಮಾರುಕಟ್ಟೆಯಲ್ಲಿ 22 ಕೆ.ಜಿ. ತೂಕದ ಚೀಲಕ್ಕೆ ₹ 50– ₹ 60 ಇದೆ. ಒಂದು ಚೀಲ ಮಾರುಕಟ್ಟೆಗೆ ಸಾಗಿಸಲು ₹ 40 ಖರ್ಚಾಗುತ್ತದೆ. ಬೆಲೆ ಇಲ್ಲದೇ ರಸ್ತೆಗೆ ಸುರಿದಿದ್ದೇನೆ’ ಎಂದು ಗುರುಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.