ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ ಪ್ರತಿಕ್ರಿಯೆಗಳು

Last Updated 3 ಜನವರಿ 2021, 21:25 IST
ಅಕ್ಷರ ಗಾತ್ರ

‘ಇಚ್ಛಾಶಕ್ತಿಯ ಕೊರತೆ’

ರೈಲ್ವೆ ಯೋಜನೆಗಳಿಗೆ ಮೀಸಲಿಡುವ ಅನುದಾನವು ನಮ್ಮ ರಾಜ್ಯದಲ್ಲಿ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಬೇರೆ ರಾಜ್ಯಗ ಳಲ್ಲಿ ರೈಲ್ವೆಗೆ ಸಿಕ್ಕ ಪ್ರಾಶಸ್ತ್ರ್ಯ ನಮ್ಮಲ್ಲಿ ದೊರೆತಿಲ್ಲ. ಇದರಿಂದಾಗಿ ಇಲ್ಲಿನ ರೈಲ್ವೆ ಮಾರ್ಗಗಳು ಕುಂಟುತ್ತಾ ಸಾಗುತ್ತಿವೆ. ಸರ್ಕಾರಗಳ ಇಚ್ಚಾಶಕ್ತಿ ಕೊರತೆ ಕೂಡ ಇದಕ್ಕೆ ಪ್ರಮುಖ ಕಾರಣ. ನಗರ ಮತ್ತು ಗ್ರಾಮೀಣ ಭಾಗಗಳಿಗೆ ಉತ್ತಮ ಸಂಪರ್ಕ ಕಲ್ಪಿಸಲು ರೈಲ್ವೆ ಸಹಕಾರಿ. ಗ್ರಾಮೀಣ ಭಾಗಗಳಿಗೂ ರೈಲ್ವೆ ವಿಸ್ತರಣೆಯಾದಲ್ಲಿ ಸರ್ಕಾರದ ಬೊಕ್ಕಸಕ್ಕೂ ಹಣ ಹರಿಯಲಿದೆ. ಜನತೆ ಕೂಡ ವ್ಯಾಪಾರ ವಹಿ ವಾಟು ಸಂಬಂಧ ನಗರ ಪ್ರದೇಶಕ್ಕೆ ಹೋಗಲು ಅನುಕೂಲವಾಗುತ್ತದೆ. ರೈಲ್ವೆ ಯೋಜನೆಗಳಿಗೆ ನಿಗದಿಪಡಿಸಿದ ಅನುದಾನವು ಸದ್ಭಳಕೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಜನಪ್ರತಿನಿಧಿಗಳು ಹಾಗು ಸಾರ್ವಜನಿಕರು ವಹಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ.

–ಸಾಸ್ವೆಹಳ್ಳಿ ನಾಗರಾಜ್, ಹೊನ್ನಾಳಿ

‘ಸಮನ್ವಯ ಕೊರತೆ’

ರೈಲ್ವೆ ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದು ರಾಜ್ಯದ ಜವಾಬ್ದಾರಿ. ಆದರೆ, ಭೂಸ್ವಾಧೀನ ಪ್ರಕ್ರಿಯೆ ಇಲ್ಲಿ ಸಂಕೀರ್ಣವಾಗಿದೆ. ಭೂಮಾಲೀಕರು ಹೆಚ್ಚುವರಿ ಭೂಪರಿಹಾರಕ್ಕೆ ನ್ಯಾಯಾಲಯದ ಮೊರೆ ಹೋಗುವ ಕಾರಣ ಬಹಳಷ್ಟು ‌ವಿಳಂಬವಾಗುತ್ತಿದೆ. ಭೂಮಾಲೀಕರಿಂದ ಒಪ್ಪಿಗೆ ಪತ್ರ ಪಡೆದು ಭೂಸ್ವಾಧೀನ ಪಡಿಸಿಕೊಂಡಲ್ಲಿ ನ್ಯಾಯಾಲಯದ ಮುಂದೆ ಹೋಗಲು ಅವಕಾಶ ಇರುವುದಿಲ್ಲ. ಆದರೆ, ಈ ಆಯ್ಕೆ ಯಾರಿಗೂ ಬೇಡವಾಗಿದೆ. ಆರಂಭದಲ್ಲಿ ಸ್ವಲ್ಪ ಹೆಚ್ಚು ವೆಚ್ಚ ತಗುಲಿದರೂ, ಮುಂದೆ ಹೆಚ್ಚುವರಿ ಪರಿಹಾರಕ್ಕೆ ನ್ಯಾಯಾಲಯವು ಮಧ್ಯ ಪ್ರವೇಶಿಸುವ ಭೀತಿ ಇರುವುದಿಲ್ಲ. ಕೇಂದ್ರ ಮತ್ತು ರಾಜ್ಯಗಳು ಈ ಕುರಿತು ಒಮ್ಮತ ಮೂಡಿಸಿಕೊಂಡಲ್ಲಿ ಭೂಸ್ವಾಧೀನ ಸಲೀಸಾಗಲಿದೆ. ಆದರೆ, ಸರ್ಕಾರಗಳ ನಡುವಿನ ಸಮನ್ವಯ ಕೊರತೆಯು ಸಮಸ್ಯೆಯನ್ನು ಹೆಚ್ಚಿಸುತ್ತಿವೆ. 2014ರಿಂದ ಕಲಬುರ್ಗಿಯಲ್ಲಿ ರೈಲ್ವೆ ವಿಭಾಗದ ಯೋಜನೆ ನನೆಗುದಿಗೆ ಬಿದ್ದಿದೆ. ನಮ್ಮ ರಾಜ್ಯದ ಸಂಸದರು ಪಕ್ಷ ಭೇದ ಮರೆತು ಒಗ್ಗಟಿನಿಂದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಆಗ ಮಹಾರಾಷ್ಟ್ರದ ಪ್ರತಿರೋಧವನ್ನು ಕಡೆಗಣಿಸಿ ರೈಲ್ವೆ ವಿಭಾಗದ ಕನಸನ್ನು ಸಾಕಾರಗೊಳಿಸಬಹುದು.

–ವೆಂಕಟೇಶ ಮುದಗಲ್, ಕಲಬುರ್ಗಿ

‘ಜನಸ್ನೇಹಿಯಾಗಿರಲಿ’

ರೈಲು ಮಾರ್ಗಗಳ ನಿರ್ಮಾಣದ ಯೋಜನೆಗಳನ್ನು ಸರ್ಕಾರಗಳು ತಮ್ಮ ಸ್ವ ಪ್ರತಿಷ್ಠೆಗೆ ಮೂಲೆಗುಂಪು ಮಾಡುತ್ತಿವೆ. ಇದರಿಂದ ಯೋಜನೆಗಳು ಕುಂಟುತ್ತಾ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಊರಿಗೆ ರೈಲ್ವೆ ಸಂಪರ್ಕ ಸಾಕಾರವಾಗುತ್ತದೆ ಎಂಬ ಜನರ ನೀರಿಕ್ಷೆಗಳನ್ನು ಸರ್ಕಾರಗಳು ಮಣ್ಣುಪಾಲು ಮಾಡುತ್ತಲೇ ಬಂದಿವೆ.

ಜಗತ್ತಿನ ಪ್ರಮುಖ ಮಹಾನಗರಗಳಲ್ಲಿ ಮೆಟ್ರೊ ರೈಲಿನ ಸಂಚಾರ ಹೆಚ್ಚುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಉತ್ತಮ ಸಾರಿಗೆ ಸೌಕರ್ಯ ಒದಗಿಸಲಾಗುತ್ತಿದೆ.

ಆದರೆ, ನಮ್ಮಲ್ಲಿ ಬಹುತೇಕ ಕಡೆ ರೈಲ್ವೆಯ ಸಂಪರ್ಕವೇ ಇಲ್ಲ. ಎಲ್ಲ ವರ್ಗದ ಜನರಿಗೂ ಸಹಕಾರಿಯಾಗಿರುವ ರೈಲ್ವೆಗೆ ಸರ್ಕಾರ ಆದ್ಯತೆ ನೀಡಬೇಕು. ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ನಡೆಸಿ, ರೈಲುಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು.

–ಜೆ. ಚಂದ್ರಶೇಖರ, ದಾವಣಗೆರೆ

‘ಆರ್ಥಿಕ ಚಟುವಟಿಕೆಗೆ ಅವಕಾಶ’

ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು ಆರಂಭವಾದ ರೈಲ್ವೆ ಯೋಜನೆಗಳು ಹಲವು ದಶಕಗಳಿಂದ ನನೆಗುದಿಗೆಬಿದ್ದಿವೆ. ಪ್ರಗತಿಯಲ್ಲಿ ಇರುವ ಯೋಜನೆಗಳನ್ನು ಪೂರ್ಣಗೊಳಿಸಲು ಅಧಿಕಾರಕ್ಕೆ ಬಂದ ಸರ್ಕಾರಗಳು ಆದ್ಯತೆ ನೀಡದ ಕಾರಣ ಯೋಜನೆಗಳು ಹಳ್ಳಹಿಡಿದಿವೆ. ಸರ್ಕಾರಗಳಿಗೆ ಯೋಜನೆಗಳನ್ನು ಘೋಷಿಸುವಲ್ಲಿ ಇರುವ ಇಚ್ಛಾಶಕ್ತಿ ಅದನ್ನ ಅನುಷ್ಠಾನ ಮಾಡುವಲ್ಲಿ ಇರದಿರುವುದು ದುರದೃಷ್ಟಕರ. ರೈಲುಗಳ ಸಂಚಾರದಿಂದ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಗ್ರಾಮೀಣ ಭಾಗದ ಯುವಜನತೆಗೆ ಕೂಡ ಉದ್ಯೋಗವಕಾಶಗಳು ದೊರೆಯಲಿವೆ. ಹಾಗಾಗಿ ಭೂಸ್ವಾಧೀನ ಸೇರಿದಂತೆ ವಿವಿಧ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ರಾಜಕಾರಣಿಗಳು ಮತ್ತು ಅಧಿಕಾರಿಗಳು ಇಚ್ಛಾಶಕ್ತಿ ತೋರಬೇಕಿದೆ.

-ಬಿ.ಎಸ್. ಚೈತ್ರ, ಚಿತ್ರದುರ್ಗ

‘ಕಾರ್ಯಪ್ರವೃತ್ತ ಆಗಲಿ’

ಬಾಗಲಕೋಟೆ ಜಿಲ್ಲೆಯ ಜನತೆಯ ಶತಮಾನದ ಕನಸಾಗಿರುವ ಕುಡಚಿ-ಬಾಗಲಕೋಟೆ ರೈಲು ಮಾರ್ಗ ಅಪೂರ್ಣವಾಗಿದೆ. ಮಾರ್ಗ ನಿರ್ಮಾಣಕ್ಕೆ ಅಗತ್ಯವಾಗಿರುವ ಮುಧೋಳ, ಜಮಖಂಡಿ ಮತ್ತು ರಾಯಬಾಗ ತಾಲ್ಲೂಕುಗಳ ನೀರಾವರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಸಮಸ್ಯೆಗಳು ಉಂಟಾಗಿ, ಮಾರ್ಗವನ್ನು ಖಜ್ಜಿಡೋಣಿ ಗ್ರಾಮದವರೆಗೆ ನಿರ್ಮಿಸಿ ರೈಲನ್ನು ಓಡಿಸಲಾಗಿದೆ. ಆಗಿರುವ ಅಡತಡೆಗಳನ್ನು ಕೂಡಲೇ ನಿವಾರಿಸಿ, ಯೋಜನೆಯನ್ನು ಪೂರ್ಣಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಬೇಕು.

–ಪ್ರೊ. ಮೌನೇಶ ಕಮ್ಮಾರ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT