ಬೆಂಗಳೂರು: ಸರ್ಕಾರ ರಚನೆಯ ಕುರಿತು ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆಯುವ ಸುಳಿವು ಸಿಗುತ್ತಿದ್ದಂತೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಮಾತಿನ ವರಸೆ ಬದಲಿಸಿದ್ದಾರೆ.
ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ಸರ್ಕಾರ ರಚನೆಗೆ ವಲಸೆ ಬಂದ 17 ಶಾಸಕರು ಕಾರಣರಲ್ಲ ಎಂದು ಎಲ್ಲೂ ಹೇಳಿಲ್ಲ. ಅವರು ಬಂದಿದ್ದರಿಂದಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರ ರಚನೆಯಲ್ಲಿ ಅವರ ತ್ಯಾಗವೂ ಇದೆ. ನಮ್ಮ ಕೊಡುಗೆಯೂ ಇದೆ’ ಎಂದು ಹೇಳಿದ್ದಾರೆ.
‘ಒಬ್ಬ ವ್ಯಕ್ತಿಯಿಂದ ಅಧಿಕಾರ ಬಂದಿಲ್ಲ ಎಂದು ಹೇಳಿದ್ದೇನೆಯೇ ಹೊರತು 17 ಜನರ ವಿಚಾರವನ್ನು ಎಲ್ಲೂ ಪ್ರಸ್ತಾಪಿಸಿಲ್ಲ’ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದರು.
‘ಹದಿನೇಳು ಶಾಸಕರಿಂದಲೇ ಬಿಜೆಪಿ ಸರ್ಕಾರ ಬಂದಿದೆ ಎಂದು ಹೇಳುವುದು ಸರಿಯಲ್ಲ. 105 ಶಾಸಕರು ಇಲ್ಲದಿದ್ದರೆ ಸರ್ಕಾರ ರಚನೆ ಆಗುತ್ತಿತ್ತೇ? ಮೊದಲು 105 ಶಾಸಕರು ನಂತರ ಉಳಿದವರು’ ಎಂದು ರೇಣುಕಾಚಾರ್ಯ ಬುಧವಾರ ಹೇಳಿದ್ದರು.
ಯಾರಿಗೂ ಬ್ಲಾಕ್ಮೇಲ್ ಮಾಡಿಲ್ಲ:‘ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿಯವರು ತೀರ್ಮಾನ ಮಾಡುತ್ತಾರೆ. ಸಂಪುಟದಲ್ಲಿ ಸ್ಥಾನ ಪಡೆಯಲು ಯಾರಿಗೂ ನಾನು ಬ್ಲಾಕ್ಮೇಲ್ ಮಾಡಿಲ್ಲ ಎಂದರು.