ಬೆಂಗಳೂರು: ರಾಜ್ಯದಲ್ಲಿ ಅತ್ಯುತ್ತಮ ಮೂಲಸೌಕರ್ಯಗಳಿರುವ100 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಬಿ.ಎಸ್ಸಿ ಮಾದರಿಯಲ್ಲಿ ನಾಲ್ಕು ವರ್ಷಗಳ ವಿಜ್ಞಾನ ಕೋರ್ಸ್ಗಳನ್ನು ಬೋಧಿಸುವ ಕುರಿತು ಜುಲೈ ಅಂತ್ಯದೊಳಗೆ ನಿರ್ದಿಷ್ಟ ಕಾರ್ಯಸೂಚಿ ರೂಪಿಸುವಂತೆ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ ಅವರಿಗೆಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಸೂಚಿಸಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಹುಶಿಸ್ತೀಯ ಬೋಧನಾ ಕ್ರಮದಂತೆ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿಜ್ಞಾನ ಕೋರ್ಸ್ ಬೋಧಿಸುವ ಕುರಿತು ಸಚಿವರು ಗುರುವಾರ ಅಧಿಕಾರಿಗಳು, ತಜ್ಞರ ಜತೆ ಸಮಾಲೋಚನೆ ನಡೆಸಿದರು.
‘ಸಾಧ್ಯವಾದರೆ, ವಾರದಲ್ಲೇ ತಾತ್ಕಾಲಿಕ ವರದಿ ನೀಡಬೇಕು. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿಜ್ಞಾನದ ಬೋಧನೆ ಕ್ರಮ ಕುರಿತೂ ಮಾಹಿತಿ ಪಡೆದು, ಲಭ್ಯವಿರುವ ಸೌಲಭ್ಯದಲ್ಲಿಯೇ ಸುಧಾರಣೆ ತರಲು ಸಾಧ್ಯವೇ ಎಂಬ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಬೇಕು’ ಎಂದು ಸೂಚಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಈಗಾಗಲೇ ಸಂಪುಟ ಒಪ್ಪಿಗೆ ನೀಡಿದೆ. ಈ ವರ್ಷದಿಂದಲೇ ಕೋರ್ಸ್ಗಳನ್ನು ಬೋಧಿಸಲು ಸಾಧ್ಯವೇ ಎಂದು ಪರೀಶೀಲಿಸಬೇಕು. ಕಾನೂನು ತೊಡಕಿದ್ದರೆ ಸುಗ್ರೀವಾಜ್ಞೆ ಜಾರಿಗೆ ತರಬೇಕಾದ ಅಗತ್ಯ ಮತ್ತು ಗಣಿತ, ಅನ್ವಯಿಕ ವಿಜ್ಞಾನ ಸೇರಿ ಯಾವ ಕೋರ್ಸ್ ಅಳವಡಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಿತು.