ಬೆಂಗಳೂರು: ‘ರಾಜ್ಯದಲ್ಲಿ ಅನಾಮಧೇಯ ಕಂಪನಿಗಳ ಹೆಸರಲ್ಲಿ ಬಿತ್ತನೆ ಬೀಜಗಳನ್ನು ರೈತರ ಮನೆ ಬಾಗಿಲಿಗೆ ಸರಬರಾಜು ಆಗುತ್ತಿರುವುದು ದೃಢ ಪಟ್ಟಿದೆ. ಈ ಬಗ್ಗೆ ರೈತರು ಎಚ್ಚರಿಕೆ ವಹಿಸಬೇಕು’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.
ದೆಹಲಿಯಲ್ಲಿ ಗುರುವಾರ ಮಾತನಾ ಡಿದ ಅವರು, ಈ ರೀತಿಯ ಬಿತ್ತನೆ ಬೀಜ ಮನೆ ಬಾಗಿಲಿಗೆ ಬಂದರೆ ಸ್ವೀಕರಿಸಬಾರದು ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಕಟ್ಟುನಿಟ್ಟಾದ ಸೂಚನೆ ನೀಡಿದೆ. ಆದ್ದರಿಂದ, ಅನಾಮಧೇಯ ಕಂಪನಿಗಳ ಹೆಸರಿನಲ್ಲಿ ರಸಗೊಬ್ಬರ ಅಥವಾ ಬಿತ್ತನೆ ಬೀಜ ಮನೆ ಬಾಗಿಲಿಗೆ ತಂದರೆ ಅಥವಾ ಪೋಸ್ಟ್ ಮೂಲಕ ಬಂದರೆ ಸ್ವೀಕರಿಸಬಾರದು ಎಂದರು.
ರಾಜ್ಯದ ಕೆಲವು ಕಡೆಗಳಲ್ಲಿ ಇಂಥ ಪ್ರಕರಣಗಳು ಬೆಳಕಿಗೆ ಬಂದಿವೆ. ಅನಾಮಧೇಯ ಕಂಪನಿಗಳ ಹೆಸರಿನಲ್ಲಿ ಬಂದಿರುವ ಬೀಜಗಳ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಗೂ ರೈತರು ದೂರು ನೀಡಿದ್ದಾರೆ. ಇದರಲ್ಲಿ ಒಳ ಸಂಚು ಇರಬಹುದು. ಆದ್ದರಿಂದ ರೈತರು ಆದಷ್ಟು ಇಲಾಖೆ ಮತ್ತು ರೈತರ ಸಂಪರ್ಕ ಕೇಂದ್ರ ಸೂಚಿಸಿದ ಅಧಿಕೃತ ಕಂಪನಿಗಳಿಂದಲೇ ಬಿತ್ತನೆ ಬೀಜ ಖರೀದಿಸಬೇಕು. ಮನೆ ಬಾಗಿಲಿಗೆ ಅನಾಮಧೇಯ ಬಿತ್ತನೆ ಬೀಜ ಪ್ಯಾಕೆಟ್ಗಳು ಬಂದರೆ ಕೂಡಲೇ ರೈತ ಸಂಪರ್ಕ ಕೇಂದ್ರಕ್ಕೆ ಮಾಹಿತಿ ನೀಡಬೇಕು ಎಂದೂ ಪಾಟೀಲ ಹೇಳಿದರು.
ಚೀನಾ ವಿವಿಧ ದೇಶಗಳಲ್ಲಿ ಆರ್ಥಿಕ ಸ್ಥಿತಿಯನ್ನು ಬುಡಮೇಲು ಮಾಡುವ ಉದ್ದೇಶದಿಂದ ಜೈವಿಕ ಅಸ್ತ್ರವಾಗಿ ಬಿತ್ತನೆ ಬೀಜ ಕಳುಹಿಸುತ್ತಿದ್ದು, ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಸರ್ಕಾರ ಕಳೆದ ತಿಂಗಳು ಎಲ್ಲ ರಾಜ್ಯಗಳಿಗೆ ಪತ್ರ ಬರೆದಿತ್ತು. ಅಲ್ಲದೆ, ಹಲವು ದೇಶಗಳು ಇಂತಹ ಎಚ್ಚರಿಕೆ ಯನ್ನು ನೀಡಿವೆ. ಚೀನಾ ದೇಶದ ಬೀಜಗಳಿಗೆ ನಿರ್ಬಂಧ ವಿಧಿಸಿವೆ.
ಹೆಚ್ಚಿನ ರಸಗೊಬ್ಬರ ಪೂರೈಕೆ: ಡಿವಿಎಸ್
ಬೆಂಗಳೂರು: ರಾಜ್ಯಕ್ಕೆ ಅಗತ್ಯವಿರುವಷ್ಟು ರಸಗೊಬ್ಬರ ಪೂರೈಕೆ ಮಾಡುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಭರವಸೆ ನೀಡಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಗುರುವಾರ ದೆಹಲಿಯಲ್ಲಿ ಅವರನ್ನು ಭೇಟಿ ಮಾಡಿದ ವೇಳೆ ಸದಾನಂದಗೌಡರು ಈ ಭರವಸೆ ನೀಡಿದ್ದಾರೆ.
‘ರಾಜ್ಯಕ್ಕೆ ಈಗಾಗಲೇ ಅವಶ್ಯಕತೆಗಿಂತಲೂ ಹೆಚ್ಚು ರಸಗೊಬ್ಬರ ಪೂರೈಕೆ ಮಾಡಲಾಗಿದೆ. ಇನ್ನೂ ಬೇಕಿದ್ದರೆ ಪೂರೈಕೆಗೆ ಸಿದ್ಧ’ ಎಂದರು.
ರಾಜ್ಯದಲ್ಲಿ ರೈತರಿಗೆ ರಸಗೊಬ್ಬರ ಕೊರತೆ ಆಗದಂತೆ ಕ್ರಮ ಕೈಗೊಳ್ಳ ಲಾಗಿದೆ. ನಕಲಿ ಬಿತ್ತನೆ ಬೀಜ ಮಾರಾಟ ತಡೆ, ನಕಲಿ ರಾಸಾಯನಿಕ ಗೊಬ್ಬ ರದ ಜಾಲವನ್ನು ಭೇದಿಸುವಲ್ಲಿ ಕೈಗೊಂಡ ಕ್ರಮಗಳ ಬಗ್ಗೆಯೂ ಬಿ.ಸಿ. ಪಾಟೀಲ ಅವರು ಸದಾನಂದಗೌಡರಿಗೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.