ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಸಿರಿಮನೆ ಜಲಪಾತದ ಬಳಿ ಇರುವ ಅರಣ್ಯ ಭೂಮಿ ಅತಿಕ್ರಮಣವಾಗಿದೆ ಎಂದು ಅರ್ಜಿ ಸಲ್ಲಿಸಿರುವ ಐವರ ಪೈಕಿ ಇಬ್ಬರು ಈ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂದು ಹೈಕೋರ್ಟ್ಗೆ ಅರಣ್ಯ ಇಲಾಖೆ ಮಾಹಿತಿ ನೀಡಿದೆ.
ವರದಿ ಸಲ್ಲಿಸಿದ ಅರಣ್ಯ ಇಲಾಖೆ ಪರ ವಕೀಲರು, ‘ಈ ಪ್ರದೇಶದಲ್ಲಿ ಅರಣ್ಯ ಭೂಮಿ ಒತ್ತುವರಿಯಾಗಿದೆ. ಅತಿಕ್ರಮಣ ಮಾಡಿಕೊಂಡಿರುವ ಜಾಗದಲ್ಲಿ ಅರ್ಜಿದಾರರಲ್ಲಿ ಇಬ್ಬರು ಅಂಗಡಿಗಳನ್ನು ನಡೆಸುತ್ತಿದ್ದಾರೆ. ಅವರಿಬ್ಬರೂ ಗ್ರಾಮ ಅರಣ್ಯ ಸಮಿತಿ ಸದಸ್ಯರೂ ಆಗಿದ್ದಾರೆ’ ಎಂದು ತಿಳಿಸಿದರು.
ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ತಿಳಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಜಲಪಾತಗಳ ಬಳಿ ಯಾವುದೇ ನಿರ್ಮಾಣ ನಡೆಯದಂತೆ ನೋಡಿಕೊಳ್ಳಿ’ ಎಂದು ಅರಣ್ಯ ಇಲಾಖೆಗೆ ನಿರ್ದೇಶನ ನೀಡಿತು.
‘ಜಲಪಾತಗಳ ಸುತ್ತಲಿನ ವಾತಾವರಣ ಮಲೀನದ ಬಗ್ಗೆ ಪರಿಶೀಲನೆಗೆ ನೇಮಕಗೊಂಡಿರುವ ತಂಡವು ಭಾರಿ ಮಳೆಯ ಕಾರಣ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗಿಲ್ಲ. ವರದಿ ಸಲ್ಲಿಸಲು ಹೆಚ್ಚಿನ ಸಮಯ ನೀಡಬೇಕು’ ಎಂದು ವಕೀಲರು ಮನವಿ ಮಾಡಿದರು.