ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ, ಆಹಾರ, ಸಾರಿಗೆ ಇಲಾಖೆಯಲ್ಲಿ ಸುಧಾರಣೆಗೆ ಶಿಫಾರಸು

ಟಿ.ಎಂ. ವಿಜಯಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗದ ಮಧ್ಯಂತರ ವರದಿ ಸಲ್ಲಿಕೆ
Last Updated 3 ಜುಲೈ 2021, 9:36 IST
ಅಕ್ಷರ ಗಾತ್ರ

ಬೆಂಗಳೂರು: ನಿಕಟಪೂರ್ವ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಶನಿವಾರ ಮಧ್ಯಂತರ ವರದಿ ಸಲ್ಲಿಸಿದೆ.

ಆಯೋಗ ಕಂದಾಯ, ಆಹಾರ ಮತ್ತು ಸಾರಿಗೆ ಈ ಮೂರು ಇಲಾಖೆಗೆ ಸಂಬಂಧಿಸಿದ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಕೆಲವು ಶಿಫಾರಸುಗಳನ್ನು ಮಾಡಿದೆ.

ಹೋಬಳಿ, ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕೆಲಸ ಮಾಡುವ ಹಾಗೂ ನಾಗರಿಕರ ಮಧ್ಯೆ ಕಾರ್ಯನಿರ್ವಹಿಸುವ ಸಿಬ್ಬಂದಿ ಜೊತೆ ಆಯೋಗ ಹಲವು ಗುಂಪು ಚರ್ಚೆ ನಡೆಸಿದೆ. 57 ಐಎಎಸ್, ಕೆಎಎಸ್ ಅಧಿಕಾರಿಗಳು ಮತ್ತು ಪ್ರೊಬೇಷನರಿ ಅಧಿಕಾರಿಗಳ ಗುಂಪು ಕ್ಷೇತ್ರ ಸಮೀಕ್ಷೆ ನಡೆಸಿ ಆಯೋಗ ಈ ವರದಿ ತಯಾರು ಮಾಡಿದೆ.

ವರದಿ ಸಲ್ಲಿಕೆ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ಪಿ, ರವಿಕುಮಾರ್, ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ. ವಿ. ರಮಣರೆಡ್ಡಿ ಮತ್ತು ಸಮಿತಿಯ ಸದಸ್ಯ ಎನ್.ಎಸ್. ಪ್ರಸನ್ನಕುಮಾರ್ ಇದ್ದರು.

ಕಂದಾಯ ಇಲಾಖೆಗೆ ಸಂಬಂಧಿಸಿದ ಶಿಫಾರಸುಗಳೇನು?

* ಎಲ್ಲ ಇಲಾಖೆಗಳು ನಾಗರಿಕರಿಗೆ ಒದಗಿಸುವ ಸುಮಾರು 800 ಆನ್‌ಲೈನ್ ಸೇವೆಗಳಿಗೆ ಅಟಲ್‌ಜೀ ಜನಸ್ನೇಹಿ ಕೇಂದ್ರಗಳು ಏಕಗವಾಕ್ಷಿ ಏಜೆನ್ಸಿಯಾಗಬೇಕು. ಈ 800 ಸೇವೆಗಳು ಬೆಂಗಳೂರು ಒನ್, ಕರ್ನಾಟಕ ಒನ್‌, ಗ್ರಾಮ ಪಂಚಾಯಿತಿ ಬಾಪೂಜಿ ಸೇವಾ ಕೇಂದ್ರಗಳು ಮತ್ತು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಲಭ್ಯವಾಗಬೇಕು.

* ಎಲ್ಲ ಸಕಾಲ ಅರ್ಜಿಗಳಲ್ಲಿ ಶೇ 81ರಷ್ಟು ಅರ್ಜಿಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗುತ್ತಿವೆ. ಎಲ್ಲ ಇಲಾಖೆಗಳ ಸಕಾಲ ಮತ್ತು ಸಕಾಲವಲ್ಲದ ಸುಮಾರು 800 ಇ-ಸೇವೆಗಳಿಗೆ ಸೇವಾ ಸಿಂಧು ಏಕ ಮಾತ್ರ ವೇದಿಕೆ ಆಗಬೇಕು.

* ರಾಜ್ಯ ಸರ್ಕಾರದ ಎಲ್ಲಾ ಇ-ಪೇಟೆಗಳನ್ನು ಮೊಬೈಲ್ ಮೂಲಕ ಒದಗಿಸಲು, ಕರ್ನಾಟಕ ಮೊಬೈಲ್ ಒನ್ ಆ್ಯಪ್ ಅನ್ನು ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿ ಮಾಡಬೇಕು.

* ಎಜೆಎಸ್‌ಕೆ, ಭೂಮಿ, ಎಸ್‌ಎಸ್‌ಪಿ, ಐಜಿಎಸ್‌ಎಲ್‌ ಮತ್ತು ಎಸ್‌ಎಸ್‌ಎಲ್‌ಆರ್ ಸೇವಾ ಪೋರ್ಟಲ್‌ಗಳು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮತ್ತು ಆನ್‌ಲೈನ್‌ ವ್ಯಾಲೆಟ್ ವ್ಯವಸ್ಥೆಯನ್ನು ಬಳಸಿಕೊಂಡು ಅರ್ಜಿ ಶುಲ್ಕವನ್ನು ಸಂಗ್ರಹಿಸಲು ಯುಪಿಐ, ಕ್ಯೂಆರ್ ಕೋಡ್ ಪಾವತಿ ವಿಧಾನ ಹೊಂದಿರಬೇಕು.

* ಕಂದಾಯ ಇಲಾಖೆಯಿಂದ ನೀಡಲಾಗುವ ಕೆಲವು ಪ್ರಮಾಣಪತ್ರಗಳು ಅನುಪಯುಕ್ತವಾಗಿದೆ. ಜನಸಂಖ್ಯಾ ಪ್ರಮಾಣಪತ್ರ, ವಾಸ ಸ್ಥಳ ಪ್ರಮಾಣಪತ್ರ, ಬೆಳೆ ಪ್ರಮಾಣಪತ್ರ, ಕೃಷಿಕ ಪ್ರಮಾಣಪತ್ರ, ಈ ಪ್ರಮಾಣಪತ್ರಗಳನ್ನು ತೆಗೆದುಹಾಕಿ ಮತ್ತು ಪರ್ಯಾಯಗಳನ್ನು ಸೂಚಿಸಿ ಆದೇಶ ಹೊರಡಿಸಬೇಕು

* ಭೂಸ್ವಾಧೀನ ನಿರ್ವಹಣಾ ಸಾಫ್ಟ್‌ವೇರ್ ವ್ಯವಸ್ಥೆಯನ್ನು ಕಂದಾಯ ಇಲಾಖೆ ತ್ವರಿತವಾಗಿ ಅಭಿವೃದ್ಧಿಪಡಿಸಬೇಕು. ಸೂಕ್ತವಾದ ಮಾರ್ಪಾಡುಗಳನ್ನು ಮಾಡುವ ಮೂಲಕ ಕೆಐಎಡಿಬಿ, ಬಿಡಿಎ, ಎನ್‌ಎಚ್‌ಐ ಸೇರಿದಂತೆ ವಿವಿಧ ಭೂ ಸ್ವಾಧೀನಪಡಿಸಿಕೊಳ್ಳುವ ಸಂಸ್ಥೆಗಳಿಂದ ಬಳಸುವುದನ್ನು ಕಡ್ಡಾಯಗೊಳಿಸಲು ಆದೇಶ ಹೊರಡಿಸಬೇಕು.

* ಅಡಮಾನ ನೋಂದಣಿ, ಭೂಮಿ ಅಥವಾ ನಿವೇಶನಗಳ ಅಡಮಾನ ಬಿಡುಗಡೆಗೊಳಿಸಲು ಮತ್ತು ಎನ್‌ಕಂಬೈನ್ಸ್ ನೀಡುವ ವಿಧಾನ ಸರಳೀಕರಿಸಬೇಕು ಮತ್ತು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಮಾಡಬೇಕು

* ಕಾವೇರಿ-2 ಮತ್ತು ಆನ್‌ಲೈನ್ ಸೇವೆಯನ್ನು (ಕೆಪಿಎಸ್-2) ಅದ್ಯತೆಯ ಮೇರೆಗೆ ಅಭಿವೃದ್ಧಿಪಡಿಸಬೇಕು. ಇದು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರುವ ಮೊದಲು ಯಾವುದೇ ಸಮಸ್ಯೆಯೇ ಇಲ್ಲದೆ ನೋಂದಣಿ ಪೂರ್ವ ದತ್ತಾಂಶ ನಮೂದು ಮಾಡಲು ಅವಕಾಶ ಮಾಡಿಕೊಡುತ್ತದೆ. ಸಂಬಂಧಪಟ್ಟವರಿಗೆ ಹೆಚ್ಚಿನ ಸಮಯವನ್ನು ಉಳಿಸುತ್ತದೆ.

* ಎಜೆಎಸ್‌ಕೆ, ತಹಶೀಲ್ದಾರ್, ಎಡಿಎಲ್‌ಆರ್, ಸಬ್ ರಿಜಿಸ್ಟ್ರಾರ್‌ ಕಚೇರಿಗಳಿಂದ ಮೇಲಿನ ಎಲ್ಲ ಕಚೇರಿಗಳಿಗೆ ಇ-ಆಫೀಸ್ ಕಡ್ಡಾಯಗೊಳಿಸಬೇಕು

* ಗ್ರಾಮ ಲೆಕ್ಕಾಧಿಕಾರಿಗಳನ್ನು ಗ್ರಾಮ ಅಧಿಕಾರಿಗಳಾಗಿ ಮರು ಪದನಾಮಕಾರಣ ಮಾಡಬಹುದು. ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯವ್ಯಾಪ್ತಿ ಗ್ರಾಮೀಣ ಪ್ರದೇಶಗಳಲ್ಲಿನ ಗ್ರಾಮ ಪಂಚಾಯಿತಿ ಕಾರ್ಯವ್ಯಾಪ್ತಿಯೊಂದಿಗೆ ಸಮನ್ವಯಗೊಳ್ಳಬೇಕು.

* ಎಲ್ಲ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಪಡಿಸಬಹುದು ಮತ್ತು ರಾಜ್ಯ ಮಟ್ಟದಲ್ಲಿ ಕಂದಾಯ ಆಯುಕ್ತಾಲಯವನ್ನು ಸ್ಥಾಪಿಸಬಹುದು.

ಆಹಾರ ಇಲಾಖೆಗೆ ಸಂಬಂಧಿಸಿ ಶಿಫಾರಸು

* ಪಡಿತರ ಕಾರ್ಡ್ ಹೊಂದಿರುವವರು ಇಚ್ಛಿಸಿದಲ್ಲಿ ಮನೆಬಾಗಿಲಿಗೆ ಪಡಿತರ ಪಡೆದುಕೊಳ್ಳಲು, ಪಡಿತರ ಕಾರ್ಡುದಾರರರು ಮತ್ತು ನ್ಯಾಯಬೆಲೆ ಅಂಗಡಿಯವರು ಪರಸ್ಪರ ಒಪ್ಪಿದ ಶುಲ್ಕವನ್ನು ಪಾವತಿಸಿ, ಪಡಿತರ ಪಡೆದುಕೊಳ್ಳಲು ಅನುಮತಿಸಬಹುದು.

* ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ಪಡಿತರ ಚೀಟಿ ಡೇಟಾಬೇಸ್‌ನೊಂದಿಗೆ ಸಂಯೋಜಿಸಬೇಕು ಅಥವಾ ಮರಣ ನೋಂದಣಿಯ ನಂತರ ಪಡಿತರ ಚೀಟಿ ಕುಟುಂಬ ಸದಸ್ಯರ ಪಟ್ಟಿ ಸ್ವಯಂಚಾಲಿತವಾಗಿ ನವೀಕರಣವಾಗುವಂತಾಗಬೇಕು.

* ರಾಜ್ಯದಿಂದ ಸರ್ಕಾರ ಅನುಮೋದಿತ ಪರೀಕ್ಷಾ ಕೇಂದ್ರಗಳನ್ನು (GATC Government Approved Test Centres) ಗುರುತಿಸಬೇಕು.

* ಕಾನೂನು ಮಾಪನಶಾಸ್ತ್ರ ಇಲಾಖೆ ನೀಡುವ ಪರವಾನಿಗೆಗಳನ್ನು 3-5 ವರ್ಷಗಳವರೆಗೆ ಸ್ವಯಂಚಾಲಿತ ಆನ್‌ಲೈನ್‌ ಮೂಲಕ ನವೀಕರಣ, ತಿದ್ದುಪಡಿ ವ್ಯವಸ್ಥೆಯನ್ನು ಜಾರಿಮಾಡಬೇಕು.

ಸಾರಿಗೆ ಇಲಾಖೆಯ ಪ್ರಮುಖ ಶಿಫಾರಸುಗಳು

* ಪ್ರಸ್ತುತ ಆರ್‌ಟಿಒ ಸೇವೆಗಳಿಗೆ ನಾಗರಿಕರು ಕಾಗದದ ಅರ್ಜಿ ಮತ್ತು ಆನ್‌ಲೈನ್ ಅರ್ಜಿ ಎರಡರಲ್ಲೂ ಸಲ್ಲಿಸಲಾಗುತ್ತಿದೆ. ನಾಗರಿಕರಿಗೆ ಎಲ್ಲ ಆರ್‌ಟಿಒ ಸೇವೆಗಳನ್ನು ಕಾಗದರಹಿತವಾಗಿ ಮಾಡಬೇಕು

* ಯಾವುದೇ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ದಾಖಲೆಗಳನ್ನು ನೋಂದಾಯಿಸಲು ಅವಕಾಶವಿರುವಂತೆ, ಸುಲಭವಾಗಿ ಸೇವೆಗಳನ್ನು ಪಡೆಯಲು ನಾಗರಿಕರು ಬೆಂಗಳೂರು ನಗರದ ಯಾವುದೇ ಆರ್‌ಟಿಒ ಕಚೇರಿ ಆಯ್ಕೆ ಮಾಡಿಕೊಳ್ಳುವಂತಿರಬೇಕು.

* ಹೆಚ್ಚಿನ ದಕ್ಷತೆಗಾಗಿ ಇ-ಆಫೀಸ್ ವ್ಯವಸ್ಥೆಯನ್ನು ಎಲ್ಲ ಆರ್‌ಟಿಒ ಕಚೇರಿಗಳು ಮತ್ತು ಸಾರಿಗೆ ಇಲಾಖೆ ಕಚೇರಿಗಳು ಬಳಸಬೇಕು

* ಸಾರಿಗೆ ಆಯುಕ್ತರು ವಶಪಡಿಸಿಕೊಂಡ ವಾಹನಗಳಿಗೆ ನಿಗದಿತ ಸಮಯದೊಳಗೆ ದಂಡ ಪಾವತಿಸದಿದ್ದರೆ, ನ್ಯಾಯಾಲಯದ ಆದೇಶ ಕಾಯುವ ಅಗತ್ಯವಿಲ್ಲದೆ ಇ-ಹರಾಜು ಹಾಕಲು ಸಾರಿಗೆ ಇಲಾಖೆಗೆ ಅನುಮತಿ ನೀಡಲು ಕರ್ನಾಟಕ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಪ್ರಸ್ತಾಪಿಸಬಹುದು.

* ನಗದು ಪಾವತಿಗಾಗಿ ಆರ್‌ಟಿಒ ಕಚೇರಿಗಳಲ್ಲಿ ತೆಗೆದುಕೊಳ್ಳುವ ಸಮಯ ಕಡಿಮೆ ಮಾಡಲು, ನಗದು ವ್ಯವಹಾರ ಕಡಿಮೆ ಮಾಡಲು, ಕ್ಯೂಆರ್ ಕೋಡ್ ಆಧಾರಿತ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಪಾವತಿ ಯಂತ್ರಗಳನ್ನು ಸ್ಥಾಪಿಸಬಹುದು.

* ಐಟಿ ನಿರ್ದೇಶಕರ ಎರಡು ಹುದ್ದೆಗಳಿವೆ (ಒಂದು ಕೆಎಸ್‌ಆರ್‌ಟಿಸಿಯಲ್ಲಿ, ಮತ್ತೊಂದು ಬಿಎಂಟಿಸಿಯಲ್ಲಿ) ಒಂದು ಹುದ್ದೆಯನ್ನು ರದ್ದುಪಡಿಸಿ ಎರಡೂ ಐಟಿ ವ್ಯವಸ್ಥೆಗಳ ಉಸ್ತುವಾರಿಗೆ ಒಬ್ಬರನ್ನೇ ನಿರ್ದೇಶಕರನ್ನಾಗಿ ಮಾಡಬಹುದು.

* ಹಳೆಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸುವ ಯೋಜನೆಯನ್ನು ಹೆಚ್ಚಿನ ಹಳೆಯ ದಾಖಲೆಗಳನ್ನು ಹೊಂದಿರುವ ಆರ್‌ಟಿಒ ಕಚೇರಿಗಳಿಂದ ಆರಂಭಿಸಿ, ಎಲ್ಲ ಆರ್‌ಟಿಒ ಕಚೇರಿಗಳಲ್ಲಿಯೂ ಕೆಲವು ವರ್ಷಗಳಲ್ಲಿ ಅನುಷ್ಠಾನಗೊಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT