ಬೆಂಗಳೂರು: ಕಬ್ಬಿಗೆ ‘ನ್ಯಾಯ ಸಮ್ಮತ ಹಾಗೂ ಪ್ರೋತ್ಸಾಹದಾಯಕ ದರ’ (ಎಫ್ಆರ್ಪಿ) ನಿಗದಿಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಪ್ರತಿಭಟನೆ 9ನೇ ದಿನಕ್ಕೆ ಕಾಲಿಟ್ಟಿದ್ದು, ರೈತರು ಬುಧವಾರ ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.
ಅರೆಬೆತ್ತಲೆಯಾಗಿ ತಲೆಯ ಮೇಲೆ ಸಿಮೆಂಟ್ ಇಟ್ಟಿಗೆ ಹೊತ್ತು ಪ್ರತಿಭಟಿಸಿದರು. ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು. ಗುರುವಾರ ಸಂಜೆಯೊಳಗೆ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಸಂಘದ ರಾಜ್ಯ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ಮಾತನಾಡಿ, ‘ಸರ್ಕಾರ ನಿದ್ರಾವಸ್ಥೆಯಲ್ಲಿದೆ. ಈ ಸರ್ಕಾರವನ್ನು ಎಚ್ಚರಿಸಲು ರೈತರ ಬಳಿ ಅಸ್ತ್ರಗಳಿವೆ. ಪ್ರಯೋಗಿಸಿದರೆ ಸರ್ಕಾರಕ್ಕೆ ಗಂಡಾಂತರ ಖಚಿತ’ ಎಂದು ಎಚ್ಚರಿಸಿದರು.
‘ಈಗಿನ ಸರ್ಕಾರವು ಉದ್ಯಮಿಗಳ ಮರ್ಜಿಯಲ್ಲಿ ಆಡಳಿತ ನಡೆಸುತ್ತಿದೆ. ರೈತ ಪರ ಎಂದು ಹೇಳುವ ಸರ್ಕಾರ ರೈತ ರನ್ನು ಬೀದಿಯಲ್ಲಿ ಮಲಗುವಂತೆ ಮಾಡಿ ರುವುದು ಏಕೆ’ ಎಂದು ಪ್ರಶ್ನಿಸಿದರು.
‘ಬುಧವಾರ ಸಂಜೆಯ ಒಳಗೆ ಸರ್ಕಾರದ ನಿರ್ಧಾರ ಹೊರ ಬೀಳದಿ ದ್ದರೆ, ರೈತರ ಹೋರಾಟದ ಕಠಿಣ ಅಸ್ತ್ರ ಪ್ರಯೋಗಿಸುತ್ತೇವೆ’ ಎಂದು ಹೇಳಿದರು.
ರಾಜ್ಯ ಉಪಾಧ್ಯಕ್ಷ ಸುರೇಶ್ ಮಾ. ಪಾಟೀಲ್, ವಿ.ಅರ್.ನಾರಾಯಣ ರೆಡ್ಡಿ, ಬೆಳಗಾವಿ ಜಿಲ್ಲಾ ಅಧ್ಯಕ್ಷ ಗುರುಸಿದ್ದಪ್ಪ ಕೋಟಗಿ, ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಶಿವಮ್ಮ, ಹಾಸನದ ಮಂಜೇಗೌಡ ಹಾಜರಿದ್ದರು.