ಇಲ್ಲಿ ಮಂಗಳವಾರ ದಲಿತ ಹಕ್ಕುಗಳ ಸಮಿತಿಯ (ಡಿಎಚ್ಎಸ್) ಬಿ. ರಾಜಶೇಖರಮೂರ್ತಿ ಮಾತನಾಡಿ, ‘ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಸಾಮಾಜಿಕ ನ್ಯಾಯ ಕಡೆಗಣಿಸಲ್ಪಟ್ಟಿದೆ. ಜಾತಿವಾದಿ ಹಾಗೂ ಮೂಲಭೂತವಾದಿ ನಿಲುವು ಕಂಡುಬರುತ್ತಿದೆ. ಈ ಹಿಂದೆ ಪಠ್ಯಪುಸ್ತಕ ಪರಿಷ್ಕರಣೆಗೆ ಒಟ್ಟು 27 ಸಮಿತಿಗಳಿದ್ದವು. ಪ್ರತಿ ಸಮಿತಿಗೂ ಒಬ್ಬಬ್ಬರು ಅಧ್ಯಕ್ಷರಿದ್ದರು. ಬರಗೂರು ರಾಮಚಂದ್ರಪ್ಪ ಒಬ್ಬರೇ ಪರಿಷ್ಕರಣೆ ಮಾಡಿರಲಿಲ್ಲ. ಸಮಿತಿಯಲ್ಲಿ 170ಕ್ಕೂ ಅಧಿಕ ಸದಸ್ಯರಿದ್ದರು. 27 ಸಮಿತಿಯಲ್ಲಿಯೂ ವಿಷಯ ತಜ್ಞರು, ಅಧ್ಯಾಪಕರು ಮತ್ತು ವಿವಿಧ ಸಮುದಾಯಕ್ಕೆ ಸೇರಿದವರು ಇದ್ದರು. ಆದರೆ, ಈಗ ಪರಿಷ್ಕರಣೆಗೆ ಒಂದೇ ಸಮಿತಿ ರಚಿಸಿದ್ದು, ಅದು ಸಾಮಾಜಿಕ ಸಮತೋಲನದಿಂದ ಕೂಡಿಲ್ಲ’ ಎಂದರು.