ಉಡುಪಿ: ‘ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸುವ ಪ್ರತಿ ವರದಿಯನ್ನೂ ಸದಸ್ಯ ಕಾರ್ಯದರ್ಶಿ ಅಧಿಕೃತಗೊಳಿಸದ ಹೊರತು, ಸರ್ಕಾರಕ್ಕೆ ಸಲ್ಲಿಸಲು ಸಾಧ್ಯವಿಲ್ಲ. ಈ ಕಾರಣದಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಯ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ’ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ‘ಅಂತ್ಯೋದಯ’ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಆಯೋಗದ ಹಿಂದಿನ ಸದಸ್ಯ ಕಾರ್ಯದರ್ಶಿ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಯ ವರದಿಯನ್ನು ಅಧಿಕೃತಗೊಳಿಸಿಲ್ಲ. ಹಾಗಾಗಿ, ಕಾನೂನಾತ್ಮಕ ತೊಡಕು ಉಂಟಾಗಿ, ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿಲ್ಲ ಎಂದರು.
ಮಾಧ್ಯಮಗಳಲ್ಲಿ ‘ಜಾತಿ ಜನಗಣತಿ’ಯ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ವಾಸ್ತವವಾಗಿ ಅದು ಜಾತಿ ಜನಗಣತಿ ಅಲ್ಲ; ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ. ವ್ಯಕ್ತಿಯೊಬ್ಬನ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಸೇರಿದಂತೆ 54 ಬಗೆಯ ಮಾಹಿತಿ ವರದಿಯಲ್ಲಿ ಅಡಕವಾಗಿದೆ ಎಂದರು.
ಯಾವ ಜಾತಿ ಯಾವ ಪ್ರವರ್ಗದಡಿ ಬರುತ್ತದೆ ಎಂಬ ಮಾಹಿತಿಯನ್ನೊಳಗೊಂಡ ಚಿಕ್ಕ ಪುಸ್ತಕವನ್ನು ಮುದ್ರಿಸಿ ಪ್ರತಿ ಗ್ರಾಮ ಪಂಚಾಯಿತಿಗೆ ವಿತರಿಸಲು ಹಿಂದುಳಿದ ವರ್ಗಗಳ ಆಯೋಗ ನಿರ್ಧರಿಸಿದೆ. ಇದರಿಂದ ಜನಸಾಮಾನ್ಯರಿಗೆ ತಮ್ಮ ಜಾತಿ ಯಾವ ಪ್ರವರ್ಗಕ್ಕೆ ಸೇರಿದೆ ಎಂಬ ಮಾಹಿತಿ ಪಂಚಾಯಿತಿಯಲ್ಲಿ ಸಿಗಲಿದ್ದು, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದರು.