ಮಂಗಳೂರು: ‘ಅಯ್ಕ್ ನಮ ಒಂಜಿ ಬ್ಲಾಸ್ಟ್ ಮಲ್ಪೊಡು. ದಾದ ಪಂಡ ತುಳು ರಾಜ್ಯಗಾದ್ ಹೋರಾಟ ಮಲ್ಪಾವೊಡು’ (ಅದಕ್ಕೆ ನಾವೊಂದು ಬ್ಲಾಸ್ಟ್ ಮಾಡಬೇಕು. ಏನೆಂದರೆ ತುಳು ರಾಜ್ಯಕ್ಕಾಗಿ ಹೋರಾಟ ಮಾಡಿಸಬೇಕು) ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಹೇಳಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗಿದೆ.
‘ಪ್ರತ್ಯೇಕ ತುಳು ರಾಜ್ಯಕ್ಕಾಗಿ ಎಲ್ಲೆಡೆ ಹೋರಾಟ ಆಗಬೇಕು. ಆಗ ಸರ್ಕಾರ ನಮ್ಮನ್ನು ಸಂಧಾನಕ್ಕೆ ಕರೆಸುತ್ತದೆ. ಅಲ್ಲಿ, ‘ನೀವು ತುಳುವನ್ನು ಅಧಿಕೃತ ರಾಜ್ಯ ಭಾಷೆ ಎಂದು ಘೋಷಣೆ ಮಾಡಿಬಿಡಿ. ಆಗ ಹೋರಾಟಗಾರರನ್ನು ಸಮಾಧಾನ ಪಡಿಸಬಹುದು’ ಎಂದು ನಾವು ಸರ್ಕಾರಕ್ಕೆ ಹೇಳಲು ಸಾಧ್ಯ’ ಎಂದು ಆಡಿಯೊದಲ್ಲಿ ಧ್ವನಿ ಇದೆ.
‘ದಯಾನಂದ ಕತ್ತಲ್ಸಾರ್ ನೀಡಿದ ಈ ಪ್ರಚೋದನಾತ್ಮಕ ಆಡಿಯೊವನ್ನು ರೆಕಾರ್ಡ್ ಮಾಡಿರುವುದು ನಾವೇ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ಈ ಹಿಂದೆಯೇ ತಂದಿದ್ದೆವು’ ಎಂದು ತುಳುನಾಡು ಟ್ರಸ್ಟ್ ಸ್ಥಾಪಕಾಧ್ಯಕ್ಷ ಜಿ.ವಿ.ಎಸ್. ಉಳ್ಳಾಲ್ ಪ್ರತಿಕ್ರಿಯಿಸಿದ್ದಾರೆ.
‘ಆಡಿಯೊದಲ್ಲಿನ ಸ್ವರದ ಶೈಲಿ ನನ್ನದೇ. ಆದರೆ, ನನ್ನ ಧ್ವನಿಯನ್ನು ರೆಕಾರ್ಡ್ ಮಾಡಿ, ಬಳಿಕ ತಿರುಚಿದ್ದಾರೆ. ನಾನು ಹಿಂಸೆಗೆ ಪ್ರಚೋದಿಸಿಲ್ಲ’ ಎಂದು ದಯಾನಂದ ಕತ್ತಲ್ಸಾರ್ ಪ್ರತಿಕ್ರಿಯಿಸಿದ್ದಾರೆ.