ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುಗಾದಿ’ಗೆ ರಂಗೇರಿದ ಖರೀದಿ

ಮಾರುಕಟ್ಟೆಗಳಲ್ಲಿ ಜನಜಂಗುಳಿ l ಬೇವು–ಬೆಲ್ಲ ಹಬ್ಬಕ್ಕೆ ಭರದ ಸಿದ್ಧತೆ l ಹೂಗಳ ಬೆಲೆ ದುಬಾರಿ
Last Updated 1 ಏಪ್ರಿಲ್ 2022, 18:54 IST
ಅಕ್ಷರ ಗಾತ್ರ

ಬೆಂಗಳೂರು:ಬೇವು–ಬೆಲ್ಲದೊಂದಿಗೆ ಯುಗಾದಿಯನ್ನು ಸಂಭ್ರಮಿಸಲು ನಗರದ ಜನ ಸಜ್ಜಾಗಿದ್ದಾರೆ. ಎರಡು ದಿನಗಳ ಹಬ್ಬದ ಆಚರಣೆಗೆ ಶುಕ್ರವಾರವೇ ಖರೀದಿ ಭರಾಟೆ ನಡೆಯಿತು.

ನಗರದ ವಸ್ತ್ರ ಮಳಿಗೆಗಳು, ಆಭರಣದ ಮಳಿಗೆಗಳಲ್ಲೂ ಖರೀದಿ ಜೋರಾಗಿತ್ತು. ಹಬ್ಬ ಇರುವುದರಿಂದ ಕಳೆದ ಮೂರು ದಿನಗಳಿಂದ ಹೂವಿನ ವ್ಯಾಪಾರ ಗರಿಗೆದರಿದ್ದು, ದರಗಳೂ ಏರಿವೆ.

ನಗರದ ಪ್ರಮುಖ ಬಡಾವಣೆಗಳಲ್ಲಿಹಬ್ಬದ ಪ್ರಯುಕ್ತ ಕಿರು ಮಾರುಕಟ್ಟೆಯ ರೀತಿಯಲ್ಲಿ ಮಳಿಗೆಗಳನ್ನು ತೆರೆಯಲಾಗಿದ್ದು, ಗ್ರಾಹಕರು ಹಬ್ಬಕ್ಕೆ ಬೇಕಾದ ಹೂವು, ಹಣ್ಣು, ತರಕಾರಿ ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು.‌

ನಗರದ ಹೊರಭಾಗಗಳಿಂದ ಮಾವು ಮತ್ತು ಬೇವಿನ ಸೊಪ್ಪನ್ನು ತಂದು ರಸ್ತೆ ಬದಿಗಳಲ್ಲಿ ರಾಶಿ ಹಾಕಿ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರು ಖರೀದಿಗೆ ಮುಗಿಬಿದ್ದರು.

ಕೆ.ಆರ್‌.ಮಾರುಕಟ್ಟೆ, ಯಶವಂತಪುರ, ಗಾಂಧಿ ಬಜಾರ್, ಮಲ್ಲೇಶ್ವರ, ಬಸವನಗುಡಿ, ಜಯನಗರ, ವಿಜಯನಗರ, ಮಡಿವಾಳ, ಕೆ.ಆರ್.ಪುರ, ಯಲಹಂಕ, ಕೆಂಗೇರಿ ಸೇರಿದಂತೆ ನಗರದ ಹಲವೆಡೆ ಹಬ್ಬದ ಖರೀದಿ ವೇಳೆ ಜನಜಂಗುಳಿ ಕಂಡು ಬಂತು.

ಹೂಗಳ ಬೆಲೆ ಗಗನಮುಖಿ: ಕಳೆದ ವರ್ಷದ ಕೋವಿಡ್ ನಿರ್ಬಂಧ ಇದ್ದಿದ್ದರಿಂದ ಜನರು ಸರಳವಾಗಿ ಯುಗಾದಿ ಆಚರಿಸಿದ್ದರು. ದರಗಳೂ ಕಡಿಮೆ ಇತ್ತು. ಈ ಸಲ ಕನಕಾಂಬರ, ಮಲ್ಲಿಗೆ, ಗುಲಾಬಿ, ಸುಗಂಧರಾಜ, ಸೇವಂತಿಗೆ, ಪತ್ರೆ, ಗೆನ್ನೇರಿ ಸೇರಿದಂತೆ ಹೂವಿನ ದರಗಳೆಲ್ಲ ಗಣನೀಯ ಏರಿಕೆ ಕಂಡಿದೆ.

‘ಕೋವಿಡ್‌ ನಂತರ ಯುಗಾದಿಯನ್ನು ಮುಕ್ತವಾಗಿ ಆಚರಿಸಲು ಅವಕಾಶ ಸಿಕ್ಕಿದೆ. ಮಾರುಕಟ್ಟೆಯತ್ತ ಬರುತ್ತಿರುವ ಗ್ರಾಹಕರ ಸಂಖ್ಯೆಯೂ ಏರುತ್ತಿದೆ. ಆದರೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೂವಿನ ದರಗಳು ಅಷ್ಟೇನೂ ಹೆಚ್ಚಾಗಿಲ್ಲ. ಶನಿವಾರದ ವೇಳೆಗೆ ದರ ಮತ್ತಷ್ಟು ಏರುವ ಸಾಧ್ಯತೆ ಇದೆ’ ಎಂದು ಕೆ.ಆರ್.ಮಾರುಕಟ್ಟೆಯ ಹೂವಿನ ವರ್ತಕ ದಿವಾಕರ್ ಹೇಳಿದರು.

‘ಯುಗಾದಿ ಎರಡು ದಿನಗಳ ಹಬ್ಬ. ಮೊದಲ ದಿನ ಸಿಹಿ ಖಾದ್ಯಗಳನ್ನು ಸವಿಯುತ್ತಾರೆ. ಎರಡನೇ ದಿನ ಹೊಸ ತೊಡಕು ಅಂಗವಾಗಿ ಮಾಂಸದ ತರಹೇವಾರಿ ಭೋಜನಗಳೊಂದಿಗೆ ಹಬ್ಬ ಸಂಪನ್ನಗೊಳಿಸುತ್ತಾರೆ. ಬೆಂಗಳೂರು, ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಯುಗಾದಿಯು ಹೊಸ ತೊಡಕು ವಿಜೃಂಭಣೆಯಿಂದ ಸಾಗುತ್ತದೆ. ಈ ವೇಳೆ ಮಾಂಸದ ಬೆಲೆ ಗಗನಕ್ಕೇರುತ್ತದೆ. ಹಲವು ತರಕಾರಿಗಳ ದರಗಳು ಸ್ಥಿರವಾಗಿವೆ’ ಎಂದು ತರಕಾರಿ
ವರ್ತಕ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT