ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರಾಗಿ ಹೀಗಾ ಮಾತನಾಡುವುದು? ಕಂಗನಾ ಪ್ರಕರಣದಲ್ಲಿ ರಾವುತ್‌ಗೆ ಕೋರ್ಟ್‌ ತರಾಟೆ

Last Updated 29 ಸೆಪ್ಟೆಂಬರ್ 2020, 16:28 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟಿ ಕಂಗನಾ ರನೌತ್‌ ಅವರ ಬಂಗಲೆ ಧ್ವಂಸ ಪ್ರಕರಣ ವಿರುದ್ಧದ ಅರ್ಜಿ ವಿಚಾರಣೆ ವೇಳೆಬಾಂಬೆ ಹೈಕೋರ್ಟ್‌ ಶಿವಸೇನೆ ಸಂಸದ ಸಂಜಯ್‌ ರಾವುತ್‌ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

‘ಒಬ್ಬ ಸಂಸದರಾಗಿ ಮಾತನಾಡುವ ರೀತಿಯೇ ಇದು?’ ಎಂದು ಹೈಕೋರ್ಟ್‌ ರಾವುತ್‌ ಅವರನ್ನು ಪ್ರಶ್ನೆ ಮಾಡಿದೆ.

ಶಿವಸೇನೆ ಆಡಳಿತರುವ ‘ಬೃಹನ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್’ (ಬಿಎಂಸಿ) ಸೆಪ್ಟೆಂಬರ್ 9 ರಂದು ತಮ್ಮ ಬಂಗಲೆಯನ್ನು ಧ್ವಂಸಗೊಳಿಸಿದ್ದರ ವಿರುದ್ಧ ರನೌತ್ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಅರ್ಜಿಯಲ್ಲಿ ರಾವುತ್‌ ಅವರನ್ನೂ ಪ್ರತಿವಾದಿಯನ್ನಾಗಿ ಮಾಡಲಾಗಿದೆ.

ಕಟ್ಟಡ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ವೇಳೆ ರಾವುತ್‌ ಅವರು ಬೆದರಿಕೆ ಹಾಕಿದ್ದಾರೆ‌ ಎಂಬ ಆರೋಪದ ಮೇಲೆ ಪ್ರಶ್ನೆ ಮಾಡಿರುವ ಹೈಕೋರ್ಟ್‌ ‘ಒಬ್ಬ ಸಂಸದರಾಗಿ ಮಾತನಾಡುವ ರೀತಿಯೇ ಇದು?’ ಎಂದು ಕೇಳಿದೆ.

‘ಅರ್ಜಿದಾರರು (ರನೌತ್‌) ಹೇಳಿದ್ದನ್ನು ನಾವು ಸಹ ಒಪ್ಪುವುದಿಲ್ಲ. ಆದರೆ ಮಾತನಾಡುವ ರೀತಿಯೇ ಇದು? ನಾವೂ ಮಹಾರಾಷ್ಟ್ರದವರು. ನಾವೆಲ್ಲರೂ ಹೆಮ್ಮೆಯ ಮಹಾರಾಷ್ಟ್ರದವರು. ಆದರೆ ನಾವು ಹೋಗಿ ಯಾರದೋ ಮನೆಯನ್ನು ಒಡೆಯುವುದಿಲ್ಲ. ಇದು ಪ್ರತಿಕ್ರಿಯಿಸುವ ಮಾರ್ಗವೇ? ನಿಮಗೆ ಕರುಣೆ ಇಲ್ಲವೇ?’ ಎಂದು ನ್ಯಾಯಮೂರ್ತಿಗಳಾದ ಎಸ್. ಜೆ. ಕಥವಲ್ಲಾ ಮತ್ತು ಆರ್. ಐ. ಚಾಗ್ಲಾ ಅವರ ವಿಭಾಗೀಯ ಪೀಠ ಪ್ರಶ್ನೆ ಮಾಡಿತು. ‌

ಇದಕ್ಕೂ ಮುನ್ನ ಮಂಗಳವಾರ ನಡೆದ ವಿಚಾರಣೆ ವೇಳೆ ರಾವುತ್‌ ಅಫಿಡವಿಟ್ ಸಲ್ಲಿಸಿದ್ದರು. ಅದರಲ್ಲಿ, ತಾವು ರನೌತ್‌ಗೆ ಬೆದರಿಕೆ ಹಾಕಿಲ್ಲ ಎಂದು ತಿಳಿಸಿದ್ದರು. ಅಲ್ಲದೆ, ಅರ್ಜಿದಾರರು (ರನೌತ್‌) ವ್ಯಾಖ್ಯಾನಿಸುತ್ತಿರುವ ರೀತಿಯಲ್ಲಿ ನಾನು ಹೇಳಿಕೆ ನೀಡಿಲ್ಲ ಎಂದು ಅವರು ತಿಳಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಕಂಗನಾ ಬಗ್ಗೆ ಸಂದರ್ಶನದಲ್ಲಿ ಮಾತಾಡಿರುವುದಾಗಿಯಾದರೂ ರಾವುತ್‌ ಈಗ ಒಪ್ಪಿಕೊಂಡಿದ್ದಾರೆ ಎಂದು ಹೇಳಿತು. ಯಾಕೆಂದರೆ, ರನೌತ್‌‌ ವಿರುದ್ಧ ರಾವುತ್‌ ಏನನ್ನೂ ಮಾತನಾಡಿಲ್ಲ ಎಂದು ಇದಕ್ಕೂ ಹಿಂದೆ ಅವರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದ್ದರು.

ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ರಾವುತ್‌ ಅವರು ನಟಿ ಕಂಗನಾ ರನೌತ್‌ ಅವರ ಬಂಗಲೆ ಧ್ವಂಸಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದರು ಎಂದು ಆರೋಪಿಸಲಾಗಿದೆ. ‘ಕಾನೂನು ಎಂದರೇನು? ಅದನ್ನು ಕೆಡವುತ್ತೇವೆ ( ವಾಟ್‌ ಈಸ್‌ ಲಾ? ಉಖಾಡ್‌ ದೇಂಗೆ)’ ಎಂದು ಹೇಳಿದ್ದರು.

‘ನೀವು ಸಂಸದರು. ನಿಮಗೆ ಕಾನೂನಿನ ಬಗ್ಗೆ ಗೌರವವಿಲ್ಲವೇ? ಕಾನೂನು ಎಂದರೇನು ಎಂದು ಕೇಳುತ್ತೀರಾ ನೀವು? ಎಂದು ನ್ಯಾಯಪೀಠ ಪ್ರಶ್ನೆ ಮಾಡಿತು.

ನಟಿ ಕಂಗನಾ ರನೌತ್‌ ಅವರ ಬಂಗಲೆ ಧ್ವಂಸ ಕಾರ್ಯಕ್ಕೆ ಈಗಾಗಲೇ ತಡೆ ನೀಡಿರುವ ಹೈಕೋರ್ಟ್‌ ಅರ್ಜಿಯ ಅಂತಿಮ ಹಂತದ ವಿಚಾರಣೆ ನಡೆಸುತ್ತಿದೆ. ತಮ್ಮ ಬಂಗಲೆ ವಿರುದ್ಧ ಅಕ್ರಮ ಕಾರ್ಯಚರಣೆ ನಡೆದಿದ್ದು, ₹2 ಕೋಟಿ ಪರಿಹಾರ ನೀಡಬೇಕು ಎಂದು ಕೋರಿ ಕಂಗನಾ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT