ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ಪೂರೈಕೆ: ಮೈಸೂರು ಡಿಸಿ ಆಕ್ಷೇಪ ಬಹಿರಂಗ

ವಾಟ್ಸ್‌ಆ್ಯಪ್‌ ಗ್ರೂಪ್‌ ಚಾಟಿಂಗ್‌
Last Updated 4 ಮೇ 2021, 20:30 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಜಿಲ್ಲಾಡಳಿತದ ಆಕ್ಸಿಜನ್‌ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ನಡೆದ ಅಧಿಕಾರಿಗಳ ಚಾಟಿಂಗ್‌ ವೇಳೆ, ಅಧಿಕಾರಿಯೊಬ್ಬರು ಜಿಲ್ಲೆಗೆ ಆಮ್ಲಜನಕ ಪೂರೈಸಲು ಮೈಸೂರು ಜಿಲ್ಲಾಧಿಕಾರಿ ಆಕ್ಷೇಪಿಸಿದ್ದಾಗಿ ಹೇಳಿದ್ದು, ವೈದ್ಯಾಧಿಕಾರಿಗಳು ಚರ್ಚಿಸಿದ ಮಾಹಿತಿಯು ಈ ಭಾಗದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಏ.27ರಂದು ನಡೆದ ಚರ್ಚೆಯಲ್ಲಿ, ವೈದ್ಯಾಧಿಕಾರಿಯೊಬ್ಬರು ‘ಸರ್‌, ಇಂದು ನಡೆದ ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ,ಚಾಮರಾಜನಗರಕ್ಕೆ ಆಮ್ಲಜನಕ ಪೂರೈಸುವುದಕ್ಕೆ ಆಕ್ಷೇಪಿಸಿದ್ದಾರೆ’ ಎಂದಿದ್ದಾರೆ. ಹೀಗಾಗಿ, ಜಿಲ್ಲೆಯು ಎದುರಿಸುತ್ತಿರುವ ಆಮ್ಲಜನಕದ ಕೊರತೆಯ ಸಮಸ್ಯೆಯು ಕೇವಲ ಒಂದೆರಡು ದಿನಗಳದ್ದಲ್ಲ ಎಂಬುದು ಬಹಿರಂಗಗೊಂಡಿದೆ. ಇದರ ಹಿಂದೆಯೇ ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಮೈಸೂರು ಜಿಲ್ಲಾಧಿಕಾರಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಆಮ್ಲಜನಕ ಘಟಕ ಭರ್ತಿಯಾಗಿದೆ–ಡೀನ್‌: ‘ಸದ್ಯ ಈಗ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 180 ಆಮ್ಲಜನಕ ಸಿಲಿಂಡರ್‌ಗಳು ಇವೆ. 6 ಸಾವಿರ ಲೀಟರ್‌ ಸಾಮರ್ಥ್ಯದ ಘಟಕವನ್ನು ಮಂಗಳವಾರ ಭರ್ತಿ ಮಾಡಲಾಗಿದೆ’ ಎಂದು ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಸಂಜೀವ್‌ ಹೇಳಿದರು.

ಸದ್ಯಕ್ಕೆ ಕೊರತೆ ಇಲ್ಲ: ‘ಸೋಂಕಿತರ ಅಗತ್ಯಕ್ಕೆ ತಕ್ಕಂತೆ ಘಟಕದಲ್ಲಿನ ಆಮ್ಲಜನಕವನ್ನು ಪೂರೈಕೆ ಮಾಡಲಾಗುತ್ತಿದೆ. ಸದ್ಯಕ್ಕೆ ಕೊರತೆ ಇಲ್ಲ’ ಎಂದು ಚಾಮರಾಜನಗ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ ತಿಳಿಸಿದರು.

ಮೈಸೂರು ಜಿಲ್ಲಾಡಳಿತದಿಂದ ಸ್ಪಂದನೆ ಸಿಕ್ಕಿಲ್ಲ; ಜಿಲ್ಲಾಧಿಕಾರಿ: ‘ಮೈಸೂರು ಜಿಲ್ಲಾಧಿಕಾರಿಯಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಜಿಲ್ಲೆಗೆ 250 ಆಮ್ಲಜನಕದ ಸಿಲಿಂಡರ್ ಕಳುಹಿಸಲಾಗಿದೆ ಎಂಬುದು ಸುಳ್ಳು’ ಎಂದು ಚಾಮರಾಜನಗರ ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

‘ತುರ್ತು ಸ್ಥಿತಿ ವೇಳೆ ಸರಿಯಾಗಿ ಮೈಸೂರು ಜಿಲ್ಲಾಡಳಿತ ಸ್ಪಂದಿಸಿಲ್ಲ. ಮೇ 2ರ ರಾತ್ರಿ ನಮ್ಮ ಮನವಿ ಮೇರೆಗೆ ಮೈಸೂರಿನ ಪದಕಿ ಸಂಸ್ಥೆಯಿಂದ 50 ಸಿಲಿಂಡರ್‌ಗಳಷ್ಟೇ ಬಂದಿವೆ’ ಎಂದು ತಿಳಿಸಲಾಗಿದೆ.

ಡೆತ್‌ ಆಡಿಟ್ ವರದಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅಂತಿಮಗೊಳಿಸಿದ ಡೆತ್ ಆಡಿಟ್ ವರದಿಯಲ್ಲಿ, ಆಮ್ಲಜನಕದ ಕೊರತೆಯಿಂದ ಮೂವರು ಮೃತಪಟ್ಟಿದ್ದಾಗಿ ಹೇಳಲಾಗಿದೆ.

ವಿಚಾರಣೆಗೆ ಹೈಕೋರ್ಟ್‌ ಒಲವು

ಚಾಮರಾಜನಗರಲ್ಲಿ ಆಮ್ಲಜನಕದ ಕೊರತೆಯಿಂದ 24 ರೋಗಿಗಳ ಸಾವು ಪ್ರಕರಣ ಸಂಬಂಧಿಸಿದಂತೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಚಾರಣೆ ನಡೆಸಲು ಹೈಕೋರ್ಟ್‌ ವಿಭಾಗೀಯ ಪೀಠ ಒಲವು ತೋರಿದೆ. ಮಂಗಳವಾರ ಈ ಕುರಿತು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಬಗ್ಗೆ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಸಲ್ಲಿಸುವಂತೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವಡಗಿ ಅವರಿಗೆ ಸೂಚಿಸಿತು.

‘ಇದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ವಿಚಾರಣೆ ನಡೆಸಲು ಸೂಕ್ತ ಪ್ರಕರಣ ಎಂಬುದು ನಮ್ಮ ಅಭಿಪ್ರಾಯ. ಇದೊಂದೇ ಪ್ರಕರಣ ಅಲ್ಲ. ಇದೇ ರೀತಿಯ ಘಟನೆಗಳು ಬೇರೆ ಜಿಲ್ಲೆಗಳಿಂದಲೂ ವರದಿಯಾಗುತ್ತಿವೆ. ಈ ವಿಚಾರದಲ್ಲಿ ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ಆಲಿಸಲು ಬಯಸುತ್ತೇವೆ’ ಎಂದು ನ್ಯಾಯಪೀಠ ಹೇಳಿತು.

ತುರ್ತು ಬಳಕೆಗಾಗಿ ಜಿಲ್ಲಾ ಕೇಂದ್ರಗಳಲ್ಲಿ ನಿಗದಿತ ಪ್ರಮಾಣದ ಆಮ್ಲಜನಕವನ್ನು ಕಾಯ್ದಿರಿಸಲು ಸಾಧ್ಯವೆ? ಎಂಬುದನ್ನೂ ಸ್ಪಷ್ಟಪಡಿಸುವಂತೆ ಸೂಚಿಸಿತು.

ಅಡ್ವೊಕೇಟ್‌ ಜನರಲ್‌ ಅವರು, ಆಮ್ಲಜನಕ ಹಂಚಿಕೆಗೆ ಸಂಬಂಧಿಸಿ ವೆಬ್‌ ಪೋರ್ಟಲ್‌ ಆರಂಭಿಸಲಾಗಿದೆ. ಅಲ್ಲಿಯೇ ಆಸ್ಪತ್ರೆಗಳು ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪಾರದರ್ಶಕವಾಗಿ ಹಂಚಿಕೆ ಪ್ರಕ್ರಿಯೆ ನಡೆಸುತ್ತಿದೆ ಎಂದು ಹೇಳಿದರು.

ಡೆತ್‌ ಆಡಿಟ್ ವರದಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಂತಿಮಗೊಳಿಸಿದ ಡೆತ್ ಆಡಿಟ್ ವರದಿಯಲ್ಲಿ, ಆಮ್ಲಜನಕದ ಕೊರತೆಯಿಂದ ಮೂವರು ಮೃತಪಟ್ಟಿದ್ದಾಗಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT