ರಾಯಚೂರು: ಹೈಕೋರ್ಟ್ ಆದೇಶದಂತೆ ಅಕ್ರಮ ಮದ್ಯ ಮಾರಾಟವನ್ನು ತಡೆಯಬೇಕುಎಂದು ಒತ್ತಾಯಿಸಿ ‘ಮದ್ಯ ನಿಷೇಧ ಆಂದೋಲನ–ಕರ್ನಾಟಕ’ ಸಂಘಟನೆಯ ನೇತೃತ್ವದಲ್ಲಿ ಮಹಿಳೆಯರು ಇಲ್ಲಿ ಅನಿರ್ದಿಷ್ಟಾವಧಿ ಧರಣಿ ಯನ್ನು ಗುರುವಾರದಿಂದ ಆರಂಭಿಸಿದರು.
ಧರಣಿ ಆರಂಭಿಸುವ ಪೂರ್ವದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ಮಹಾತ್ಮಗಾಂಧಿ ಪುತ್ಥಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಶಾಸಕ ಡಾ.ಶಿವರಾಜ ಪಾಟೀಲ ಅವರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
‘ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ಎಲ್ಲೆಲ್ಲಿ ನಡೆಯುತ್ತಿದೆ. ಯಾರು ಮಾರಾಟ ಮಾಡುತ್ತಿದ್ದಾರೆ ಎಂದು ಸ್ಥಳ ಸಹಿತ ಮಾಹಿತಿ ಕೊಟ್ಟರೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ಎರಡು ಸಲ ನೆನಪಿಸಿದರೂ ಪ್ರಯೋಜನವಾಗಿಲ್ಲ. ಈಗ ಮನವಿ ಪಡೆಯಲೂ ಜಿಲ್ಲಾಧಿಕಾರಿ ಬರುತ್ತಿಲ್ಲ. ಹೀಗಾಗಿ ಜಿಲ್ಲಾಡಳಿತಕ್ಕೆ ಮತ್ತೆ ಮನವಿ ಸಲ್ಲಿಸುತ್ತಿಲ್ಲ’ ಎಂದು ಮದ್ಯ ನಿಷೇಧ ಆಂದೋಲನ ಕರ್ನಾಟಕ ರಾಜ್ಯ ಸಂಚಾಲಕಿ ಸ್ವರ್ಣಾ ಭಟ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಹಾತ್ಮಗಾಂಧಿ ಪುತ್ಥಳಿ ಹತ್ತಿರ ಧರಣಿ ಮಾಡುವುದಕ್ಕೆ ಪೊಲೀಸರು ಅವಕಾಶ ನೀಡಿರಲಿಲ್ಲ. ಹೀಗಾಗಿ ಧರಣಿ ನಿರತರು ಮತ್ತು ಪೊಲೀಸರ ಮಧ್ಯೆ ಕೆಲಕಾಲ ವಾಗ್ವಾದ ನಡೆಯಿತು. ಆನಂತರ ಪೊಲೀಸರು ಸಮ್ಮತಿಸಿದರು.
ಪದಾಧಿಕಾರಿಗಳಾದ ವಿದ್ಯಾ ಪಾಟೀಲ, ಉದಯ, ಮೋಕ್ಷಮ್ಮ, ಪದ್ಮಾ, ಗುರುರಾಜ, ವೀರೇಶ, ಬಸವರಾಜ ಇದ್ದರು.