ಬೆಂಗಳೂರು: ಸಾಹಿತಿ ದಿವಂಗತ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ (84) ಅವರು ಅಲ್ಪಕಾಲದ ಅನಾರೋಗ್ಯದಿಂದ ನಗರದ ರಾಜಲಕ್ಷ್ಮೀ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ.
ನಗರದ ಎಚ್ಎಸ್ಆರ್ ಲೇಔಟ್ನಲ್ಲಿರುವ ಪುತ್ರಿ ಸುಸ್ಮಿತಾ ಅವರ ನಿವಾಸದಲ್ಲಿಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಳಿಕ ರಾಜೇಶ್ವರಿ ಅವರ ಇಚ್ಛೆಯಂತೆ ಬೌರಿಂಗ್ ಆಸ್ಪತ್ರೆಗೆ ದೇಹದಾನ ಮಾಡಲಾಯಿತು.
ರಾಜೇಶ್ವರಿಯವರು ಮೈಸೂರು ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಆನರ್ಸ್ ಮತ್ತು ಎಂ.ಎ. ಓದಿದವರು. ತೇಜಸ್ವಿ ಅವರನ್ನು ಪ್ರೀತಿಸಿ ವಿವಾಹವಾಗಿದ್ದ ಅವರು, ತಮ್ಮ ಬರಹಗಳ ಮೂಲಕ ಗುರುತಿಸಿಕೊಂಡಿದ್ದರು. ‘ನನ್ನ ತೇಜಸ್ವಿ’, ‘ನಮ್ಮ ಮನೆಗೂ ಗಾಂಧಿ ಬಂದರು’ಅವರ ಕೃತಿಗಳು. ತೇಜಸ್ವಿ ನಿಧನದ ಬಳಿಕವೂ ಅವರು ಮೂಡಿಗೆರೆಯ ಮನೆಯಲ್ಲೇ ನೆಲೆಸಿದ್ದರು. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರಾಗಿ, ತೇಜಸ್ವಿ ಬದುಕಿನ ದಾಖಲೆಗಳನ್ನು ಕಾಪಾಡಿಕೊಂಡು ಒಂದು ಮ್ಯೂಸಿಯಂ ಸ್ಥಾಪಿಸುವ ಸಿದ್ಧತೆಯಲ್ಲಿದ್ದರು.
‘ಅಮ್ಮ ತುಂಬು ಜೀವನ ನಡೆಸಿ ಬದುಕಿಗೆ ವಿದಾಯ ಹೇಳಿದ್ದಾರೆ. ತುಂಬಾ ಮಾನವೀಯ ಕಾಳಜಿಯಿದ್ದ ನಿಜ ಸ್ಥೈರ್ಯ ಹೊಂದಿದ್ದ ಮಹಿಳೆ. ಹೆಚ್ಚು ಕಷ್ಟಪಡದೇ ಹೊರಟುಹೋದರು. ಅಂತಿಮ ಕಾರ್ಯವನ್ನೂ ಅವರ ಇಚ್ಛೆಯಂತೇ ನಡೆಸಿ ದೇಹದಾನ ಮಾಡುತ್ತಿದ್ದೇವೆ’ ಎಂದು ಹಿರಿಯ ಪುತ್ರಿ ಸುಸ್ಮಿತಾ ತಿಳಿಸಿದರು.
ಹಲವು ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ರಾಜೇಶ್ವರಿ ತೇಜಸ್ವಿ
ಜನನ: 1937, ಬೆಂಗಳೂರು
ವಿದ್ಯಾಭ್ಯಾಸ: ತತ್ವಶಾಸ್ತ್ರದಲ್ಲಿ ಆನರ್ಸ್/ ಎಂ.ಎ, ಮೈಸೂರಿನ ಮಾನಸ ಗಂಗೋತ್ರಿ
ವಿವಾಹ: 1966ರಲ್ಲಿ ಪೂರ್ಣಚಂದ್ರ ತೇಜಸ್ವಿ ಅವರೊಂದಿಗೆ ಮದುವೆ
ಮೊದಲ ಪುಸ್ತಕ: 'ನನ್ನ ತೇಜಸ್ವಿ'
Koo App
Koo Appಖ್ಯಾತ ಸಾಹಿತಿ ಶ್ರೀ ಪೂರ್ಣಚಂದ್ರ ತೇಜಸ್ವಿಯವರ ಪತ್ನಿ ಶ್ರೀಮತಿ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿಯವರ ನಿಧನ ಬಹಳ ದುಃಖ ತಂದಿದೆ. ತೇಜಸ್ವಿಯವರ ಬರಹಗಳಿಗೆ ಸ್ಪೂರ್ತಿಶಕ್ತಿಯಾಗಿದ್ದ ಅವರು ಕೂಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದರು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬದವರಿಗೆ ನೋವು ಸಹಿಸುವ ಶಕ್ತಿ ದೊರೆಯಲಿ.- Araga Jnanendra (@aragajnanendra) 14 Dec 2021
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.