ಕೆಎಲ್ಇ: ಯುವಕನಿಗೆ ಯಕೃತ್ ಕಸಿ ಯಶಸ್ವಿ

ಬೆಳಗಾವಿ: ‘ಇಲ್ಲಿನ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 19 ವರ್ಷದ ಯುವಕ ನಿಗೆ ಯಶಸ್ವಿಯಾಗಿ ಯಕೃತ್ ಕಸಿ ಮಾಡಲಾಗಿದೆ’ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.
‘ಹಾವೇರಿಯ ದರ್ಶನ್ ಎಂಬ ಯುವಕ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದರು. ಯಕೃತ್ ಕಸಿಗಾಗಿ ಅವರು ಕೆಎಲ್ಇಎಸ್ ಆಸ್ಪತ್ರೆಗೆ ನೋಂದಣಿ ಮಾಡಿಸಿದ್ದರು. ಇತ್ತೀಚೆಗ ಅಥಣಿಯ 30 ವರ್ಷದ ಯುವಕನ ಮಿದುಳು ನಿಷ್ಕ್ರಿಯಗೊಂಡಿತ್ತು. ಅವರ ಪಾಲಕರು ಅಂಗಾಂಗ ದಾನ ಮಾಡಿ ದ್ದರು. ಅವರ ಯಕೃತ್ತನ್ನೇ ದರ್ಶನ್ ಅವರಿಗೆ ಕಸಿ ಮಾಡಲಾಗಿದೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿ
ಯಲ್ಲಿ ತಿಳಿಸಿದರು.
‘ಬೆಂಗಳೂರು, ಮುಂಬೈ, ಹೈದರಾಬಾದ್ನಂಥ ನಗರಗಳ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚದಲ್ಲಿ ಯಕೃತ್ ಕಸಿ ಮಾಡಲಾಗುತ್ತದೆ. ಅಲ್ಲಿಗಿಂತ ಅರ್ಧದಷ್ಟು ವೆಚ್ಚದಲ್ಲಿ ಕೆಎಲ್ಇಎಸ್ ಆಸ್ಪತ್ರೆಯಲ್ಲಿ ಕಸಿ ಮಾಡಲಾಗಿದೆ’ ಎಂದರು.
‘ಆಸ್ಪತ್ರೆಯ ಗ್ಯಾಸ್ಟ್ರೊಎಂಟರಾಲಜಿ ವಿಭಾಗದ ಡಾ.ಸಂತೋಷ ಹಜಾರೆ, ಡಾ.ಸುದರ್ಶನ ಚೌಗುಲೆ ಮತ್ತು ಬೆಂಗಳೂರಿನ ಅಸ್ಟರ್ ಆಸ್ಪತ್ರೆಯ ಡಾ.ಸೋನಲ್ ಆಸ್ಥಾನಾ ಅವರ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಅರಿವಳಿಕೆ ತಜ್ಞರಾದ ಡಾ.ಅರುಣ, ಡಾ.ರಾಜೇಶ ಮಾನೆ, ಡಾ.ಮಂಜುನಾಥ, ಜೀವ ಸಾರ್ಥಕತೆ, ಮೋಹನ ಫೌಂಡೇಷನ್ ಮತ್ತು ಕಸಿ ಸಂಯೋಜಕರ ತಂಡ ಇದಕ್ಕೆ ಕೈ ಜೋಡಿಸಿದೆ’ ಎಂದರು.
ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ, ಬಹುವಿಧ ಅಂಗಾಂಗ ಘಟಕದ ಅಧ್ಯಕ್ಷ ಡಾ.ಆರ್.ಬಿ.ನೇರ್ಲಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.