ಹೊಸಪೇಟೆ (ವಿಜಯನಗರ): ‘ರಾಜ್ಯದ ಎಲ್ಲ ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ಹಿಂದಿನಂತೆ ದನದ ಮಾಂಸ ಪೂರೈಸಲು ಚಿಂತನೆ ನಡೆದಿದೆ. ಇದಕ್ಕೆ ಪೂರಕವಾಗಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ ಸಡಿಲಗೊಳಿಸಿ, ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಶನಿವಾರ ತಿಳಿಸಿದರು.
ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಭೇಟಿ ನೀಡಿದ್ದ ಅವರು, ‘ಇಷ್ಟರಲ್ಲೇ ಮೃಗಾಲಯ ಪ್ರಾಧಿಕಾರದ ಸಭೆ ನಡೆಯಲಿದೆ. ಆ ಸಭೆಯಲ್ಲಿ ವಿಸ್ತೃತ ವಾಗಿ ಚರ್ಚಿಸಿ ಮತ್ತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು‘ ಎಂದು ತಿಳಿಸಿದರು.
‘ಕೆಲವು ಕಡೆ ಪ್ರಾಣಿಗಳು ಕೋಳಿಮಾಂಸಕ್ಕೆ ಹೊಂದಿಕೊಂಡಿವೆ. ಕೆಲವೆಡೆ ಹೊಂದಿಕೊಳ್ಳುತ್ತಿವೆ. ಆದರೆ, ದನದ ಮಾಂಸವೇ ಅವುಗಳಿಗೆ ಅಚ್ಚುಮೆಚ್ಚು. 13 ವರ್ಷ ಮೀರಿದ ಹಸುಗಳನ್ನು ಮೃಗಾಲಯಗಳಿಗೆ ಕೊಡಬಹುದು. ಟೆಂಡರ್ ಕರೆದು, ದನದಮಾಂಸ ಪೂರೈಕೆಗೆ ವ್ಯವಸ್ಥೆ ಮಾಡಬಹುದು’ ಎಂದು ಹೇಳಿದರು.
‘ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಯೋಜನೆಯಡಿ ರಾಜ್ಯದ ಎಲ್ಲ ಮೃಗಾಲಯಗಳ ನಿರ್ವಹಣೆಗೆ ಶೇ 0.5ರಷ್ಟು ಹಣ ಮೀಸಲಿಡುವಂತೆ ಕೋರಿ ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರಿಗೆ ಪತ್ರ ಬರೆದಿದ್ದೇವೆ. ಸದ್ಯದಲ್ಲಿಯೇ ಇದರ ಬಗ್ಗೆ ತೀರ್ಮಾನ ಹೊರಬೀಳಬಹುದು’ ಎಂದು ತಿಳಿಸಿದರು.