ಪೊಲೀಸರಿಂದ ಅಮಾನವೀಯವಾಗಿ ದೌರ್ಜನ್ಯಕ್ಕೀಡಾದ ಯುವಕ ತನ್ವೀರ್ ಕುರಿತು ‘ಮೆಟ್ರೊ’ ಮಾಡಿದ ವಿಸ್ತ್ರೃತ ವರದಿಗೆ ಹಲವು ಓದುಗರು ಸ್ಪಂದಿಸಿದ್ದಾರೆ. ತನ್ವೀರ್ ನೋವಿಗೆ ಮಿಡಿದ ಹಲವರು, ಪೊಲೀಸ್ ದೌರ್ಜನ್ಯ, ಸರ್ಕಾರದ ನಿರ್ಲಕ್ಷ್ಯಕುರಿತು ‘ಪ್ರಜಾವಾಣಿ ಫೇಸ್ ಬುಕ್’ ಅಕೌಂಟ್ಗೆ ಪ್ರತಿಕ್ರಿಯಿಸಿ ತಮ್ಮ ಮುಕ್ತ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕಾನೂನು ಇರುವುದು ಜನ ಹಿತ ಕಾಪಾಡಲು, ಅಂಥ ಕಾನೂನೇ ದೌರ್ಜನ್ಯ ಮಾಡಿದರೆ ಯಾರ ಬಳಿ ರಕ್ಷಣೆ ಪಡೆಯುವುದು ಎನ್ನುವುದು ಬಹುತೇಕರ ಅಭಿಮತ. ಮಾನವೀಯತೆ, ಅಂತಃಕರಣ ಅನ್ನುವುದು ಜಾತಿ, ಧರ್ಮ ಮೀರಿದ್ದು ಅನ್ನುವಂಥದ್ದನ್ನು ತನ್ವೀರ್ ನೋವಿಗೆ ಮಿಡಿದ ಅನೇಕರ ಹಾರೈಕೆಗಳಲ್ಲಿದೆ. ಖಾಕಿ ತೊಟ್ಟು, ಲಾಠಿ ಹಿಡಿವವರಲ್ಲಿ ಮಾನವೀಯತೆಯೂ ಇರಲಿ ಎಂಬುದು ಬಹುತೇಕ ಓದುಗರ ಅಭಿಲಾಷೆ.