ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವೇಶ್ವರ ಸಹಕಾರಿ ಬ್ಯಾಂಕ್‌ ಶತಮಾನೋತ್ಸವ

Last Updated 5 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಒಂದು ಸಹಕಾರಿ ಸಂಸ್ಥೆ ಜನಪರವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಎಂಥ ಭವ್ಯ ಸಾಧನೆ ಮಾಡಬಹುದು ಎಂಬುದಕ್ಕೆ ಬಾಗಲಕೋಟೆಯ ಬಸವೇಶ್ವರ ಸಹಕಾರಿ ಬ್ಯಾಂಕ್‌ ಒಂದು ಮಾದರಿಯಾಗಿ ನಿಂತಿದೆ.

ಒಂದು ಸಣ್ಣ ಸಹಕಾರಿ ಸಂಸ್ಥೆಯಾಗಿ 1917ರಲ್ಲಿ ಆರಂಭವಾದ ಈ ಬ್ಯಾಂಕ್‌ನ ಅಂದಿನ ಷೇರು ಬಂಡವಾಳ ಕೂಡಾ ₹ 1,917 ಆಗಿತ್ತು ಎಂಬುದು ಒಂದು ವಿಶೇಷ. ಬಸವೇಶ್ವರ ಸಹಕಾರಿ ಬ್ಯಾಂಕ್‌ ಇಂದು ರಾಜ್ಯಮಟ್ಟದ ಸಂಸ್ಥೆಯಾಗಿ ಬೆಳೆದಿದೆ.  ಗುರುಬಸವ ಮಹಾಸ್ವಾಮೀಜಿ ಬೀಳೂರ ಇವರು ಸಂಸ್ಥೆಯ ಪ್ರಥಮ ಸದಸ್ಯರು. ಮಹಾಂತಪ್ಪಣಾ ರುದ್ರಪ್ಪ ತಪ್ಪಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಮೊದಲ ಸಭೆ ನಡೆಯಿತು.

ಬಾಗಲಕೋಟೆ ನಗರದಲ್ಲಿ 5, ಬೀಳಗಿ, ನಿಡಗುಂದಿ, ಕೆರೂರ, ಆಲಮಟ್ಟಿ, ಮುಧೋಳ, ತೇರದಾಳ, ಬನಹಟ್ಟಿ, ಮಹಾಲಿಂಗಪೂರ, ಬಸವನಬಾಗೇವಾಡಿ, ವಿಜಯಪುರ ಮತ್ತು ಗದಗದಲ್ಲಿ ಒಟ್ಟು 17 ಶಾಖೆಗಳನ್ನು ಹೊಂದಿದೆ. 10 ಹೊಸ ಶಾಖೆಗಳನ್ನು ಆರಂಭಿಸಲು ಭಾರತೀಯ ರಿಸರ್ವ ಬ್ಯಾಂಕ್ ಅನುಮತಿ ನೀಡಿದೆ.

ಧಾರವಾಡ, ಗೋಕಾಕ, ಬೆಳಗಾವಿ, ಮೂಡಲಗಿ, ರಾಮದುರ್ಗ, ಮುದ್ದೇಬಿಹಾಳ, ಲೋಕಾಪುರ, ಲಕ್ಷ್ಮೇಶ್ವರ, ಕೊಲಾರ ಮತ್ತು ಗಜೇಂದ್ರಗಡದಲ್ಲಿ ಹೊಸ ಶಾಖೆಗಳನ್ನು ಆರಂಭಿಸಲು ಸಿದ್ಧತೆಗಳು ನಡೆಯುತ್ತಿವೆ.

ಕೈಗಾರಿಕಾ ಕ್ರಾಂತಿಗೆ ನೆರವು

ಬಸವೇಶ್ವರ ಬ್ಯಾಂಕ್‌ ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗು ತಲೆ ಎತ್ತಲು ಬೆಂಬಲ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಬ್ಯಾಂಕ್‌, ಕಳೆದ ಒಂದು ದಶಕದ ಅವಧಿಯಲ್ಲಿ 14 ಸಕ್ಕರೆ, 8 ಸಿಮೆಂಟ್ ಮತ್ತು 200 ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉದಾರವಾಗಿ ಸಾಲ ನೀಡಿದೆ. ಕೃಷಿ ಆಧಾರಿತ ಕೈಗಾರಿಕೆಗಳ ಪ್ರಗತಿಗೆ ನೆರವಿನ ಹಸ್ತ ಚಾಚಿದೆ.

‘ತಾವು ಕೈಗಾರಿಕೋದ್ಯಮಿಗಳಾಗಿ ಬೆಳೆಯಲು ಈ  ಸಹಕಾರಿ ಬ್ಯಾಂಕ್‌ನ ಕೊಡುಗೆ ಗಮನಾರ್ಹವಾಗಿದೆ’ ಎಂದು  ಕೃಷಿ ಕುಟುಂಬದಿಂದ ಬಂದ ಬಾಗಲಕೋಟೆ ಪ್ರಮುಖ ರಾಜಕಾರಣಿಗಳಾದ ಮುರುಗೇಶ ನಿರಾಣಿ, ಎಸ್. ಆರ್. ಪಾಟೀಲ, ಸಿದ್ದು ನ್ಯಾಮಗೌಡ ಅವರು ಅಭಿಮಾನದಿಂದ ಹೇಳುತ್ತಾರೆ.

ಬ್ಯಾಂಕ್‌ನ ನೆರವಿನಿಂದ ಸಂಗಮೇಶ ಆರ್. ನಿರಾಣಿ, ಮಹಾಂತೇಶ ಉದಪುಡಿ, ಬಸವರಾಜ ಗೋಸಾರ, ಕುಮಾರ ಮಲಘಾನ, ಶಿವಾನಂದ ಡಂಗಿ, ಸತೀಶ ಬಂಡಿವಡ್ಡರ ಮುಂತಾದವರು ಯುವ ಉದ್ಯಮಿಗಳಾಗಿ ಬೆಳೆದಿದ್ದಾರೆ. ಸಾವಿರಾರು ಯುವಕರಿಗೆ ಉದ್ಯೋಗ ಒದಗಿಸಿದ್ದಾರೆ.

‘ದಯವೇ ಧರ್ಮದ ಮೂಲವಯ್ಯ’– ಇದು ಈ ಬ್ಯಾಂಕ್‌ನ ಧ್ಯೇಯ ವಾಕ್ಯ. ಜನಕಲ್ಯಾಣವೇ ಪರಮ ಗುರಿಯಾಗಿ ಇಟ್ಟುಕೊಂಡು ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಶ್ರಮವಹಿಸಿ ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದರಿಂದ ಸಂಸ್ಥೆ ಪ್ರತಿ ವರ್ಷ ಲಾಭಗಳಿಸುತ್ತಾ ಮುನ್ನಡೆದಿದೆ.

ಬ್ಯಾಂಕ್‌ ಒಟ್ಟು ₹ 560 ಕೋಟಿಗಳಷ್ಟು ಠೇವಣಿ ಹೊಂದಿದೆ. ಇದು ಬ್ಯಾಂಕ್‌ನ ಬಗ್ಗೆ ಸಾರ್ವಜನಿಕರು ಹೊಂದಿದ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಮೂರು ತಲೆಮಾರುಗಳಿಂದ ಗ್ರಾಹಕರು ಈ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುವ ಉದಾಹರಣೆಗಳಿವೆ. ಇದು ನಿಜಕ್ಕೂ ಅಪರೂಪದ ಸಂಗತಿ.
ಎಲ್ಲ ಶಾಖೆಗಳು ಗಣಕೀಕರಣಗೊಂಡಿವೆ. ಎಟಿಎಂಗಳ ಸುರಕ್ಷತೆಗೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಬ್ಯಾಂಕ್‌ನ ಎಟಿಎಂ ಕಾರ್ಡಗಳನ್ನು ಯಾವುದೇ ಬ್ಯಾಂಕಿನ ಪಿಒಎಸ್ ಟರ್ಮಿನಲ್‍ಗಳಲ್ಲಿ ಉಪಯೋಗಿಸಬಹುದು. ಇ–ಕಾಮರ್ಸ ವ್ಯವಹಾರಕ್ಕೂ ಬಳಸಬಹುದು.  ಕೋರ್ ಬ್ಯಾಂಕಿಗ್ ವ್ಯವಸ್ಥೆ ಹೊಂದಿರುವುದರಿಂದ ಯಾವುದೇ ಶಾಖೆಯ ಮುಖಾಂತರ ವ್ಯವಹರಿಸಬಹುದು.

ಈಗಾಗಲೇ ಎಲ್ಲ ಶಾಖೆಗಳಲ್ಲಿ ಎಸ್ಎಂಎಸ್ ಅಲರ್ಟ್‌ ಸೇವೆ ಪ್ರಾರಂಭಿಸಿರುವುದರಿಂದ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.  ಎಲ್ಲ ಶಾಖೆಗಳಿಗೆ ಸಿಟಿಎಸ್ 2010 ಆಧಾರಿತ ಚೆಕ್ ಬುಕ್‍ಗಳನ್ನು ಒದಗಿಸಲಾಗಿದ್ದು ಬದಲಾಯಿಸಿಕೊಳ್ಳಲು ಕೋರಲಾಗಿದೆ.  ಸಿ.ಟಿ.ಎಸ್. ಆಧಾರಿತ ಕ್ಲಿಯರಿಂಗ್ ವ್ಯವಸ್ಥೆ ಪ್ರಾರಂಭಿಸಲಾಗಿದೆ.
ಬ್ಯಾಂಕು ಸ್ವಂತ ಐಎಫ್ಎಸ್‌ಸಿ ಹೊಂದಿರುವದರಿಂದ ಎಲ್ಲ ಖಾತೆದಾರರು ಬೇರೆ ಇನ್ನಾವುದೇ ಬ್ಯಾಂಕಿನಿಂದ ಹಣ ವರ್ಗಾಯಿಸಬಹುದು.   ಎಲ್ಲ ಖಾತೆದಾರರಿಗೂ ಮೊಬೈಲ್ ಆಧಾರಿತ ಹಣ ವರ್ಗಾವಣೆಯ ವ್ಯವಸ್ಥೆ ಒದಗಿಸಲಾಗಿದೆ.

‘ನಾವು ಬ್ಯಾಂಕನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿದ್ದೇವೆ. ಸಣ್ಣ ವ್ಯಾಪಾರಗಳಿಗೆ, ಸ್ವ ಉದ್ಯೋಗ ಆರಂಭಿಸುವರಿಗೆ, ಹೊಲಿಗೆ, ಕಸೂತಿ, ಬಟ್ಟೆ ವ್ಯಾಪಾರ, ಕುರಿ-ಕೋಳಿ ಸಾಕುವವರಿಗೆ ಸಾಲ ನೀಡಿದ್ದೇವೆ. ಕಿರು ಹಣಕಾಸು ಸೌಲಭ್ಯವನ್ನು ದೇಶದಲ್ಲಿಯೇ ಮೊದಲು ನಾವು ಆರಂಭಿಸಿದ್ದೇವೆ. ಬಡವರು ನಿಜಕ್ಕೂ ಪ್ರಾಮಾಣಿಕರು. ಅವರು ಮರ್ಯಾದೆಗೆ ಬಹಳ ಹೆದರುತ್ತಾರೆ. ಅವರಿಂದಲೇ ಬಸವೇಶ್ವರ ಬ್ಯಾಂಕ್‌ ದೊಡ್ಡದಾಗಿ ಬೆಳೆದಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರು ಹೆಮ್ಮೆಯಿಂದ ಹೇಳುತ್ತಾರೆ.

ಸಾಮಾಜಿಕ ಕೆಲಸಗಳು

ಬ್ಯಾಂಕ್‌ ಮೂಲಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದಾರವಾಗಿ ನೆರವು ನೀಡಲಾಗುತ್ತಿದೆ. ಇದುವರೆಗೆ  600 ವಿದ್ಯಾರ್ಥಿಗಳು   ಅನುಕೂಲತೆ ಪಡೆದಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ  ಪ್ರೋತ್ಸಾಹ ನೀಡಲಾಗುತ್ತಿದೆ. ಮಹಿಳೆಯರಿಗೆ ರಂಗೋಲಿ, ಕಸೂತಿ ತರಬೇತಿ ನೀಡಲೂ ವ್ಯವಸ್ಥೆ ಮಾಡಲಾಗಿದೆ.

**

ಪ್ರಶಸ್ತಿಗಳು

ಬ್ಯಾಂಕ್‌ನ ಸಾಧನೆ ಗುರುತಿಸಿ ರಾಜ್ಯ ಸಹಕಾರಿ ಇಲಾಖೆಯು, ‘ಅತ್ಯುತ್ತಮ ಸಹಕಾರಿ ಬ್ಯಾಂಕ್‌’ ಎಂದು ಐದು ಬಾರಿ ಪ್ರಶಸ್ತಿ ನೀಡಿರುವುದು ಒಂದು ದಾಖಲೆ. ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರಿಗೆ ‘ಸಹಕಾರಿ ರತ್ನ’ ಪ್ರಶಸ್ತಿ ಕೂಡ ಲಭಿಸಿದೆ. 2017-18ನೇಯ ವರ್ಷವನ್ನು ಶತಮಾನೋತ್ಸವ ವರ್ಷವಾಗಿ ಹೆಮ್ಮೆಯಿಂದ ಆಚರಿಸುತ್ತಿದೆ. ಶತಮಾನೊತ್ಸವ ಅಂಗವಾಗಿ ಅನೇಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.


ಪ್ರಕಾಶ ತಪಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT