ಮಾಲೂರು: ನೂತನ ವರ್ಷಾಚರಣೆ ಅಂಗವಾಗಿ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸಾರ್ವಜನಿಕರು ಸೋಮವಾರ ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸಿ ಸಿಹಿ ಹಂಚುವ ಮೂಲಕ ಹೊಸ ವರ್ಷ ಸ್ವಾಗತಿಸಿದರು.
ಪಟ್ಟಣದ ಮಹಾರಾಜ ವೃತ್ತದಲ್ಲಿರುವ ಮಾರಿಕಾಂಬ, ಸುಬ್ರ ಮಣ್ಯಂ ಸ್ವಾಮಿ, ಗಾಂಧಿವೃತ್ತದಲ್ಲಿರುವ ಪಟಾಲಮ್ಮ, ಮುತ್ಯಾಲಮ್ಮ, ಅರಳೇರಿ ರಸ್ತೆಯಲ್ಲಿರುವ ಶಿರಡಿ ಸಾಯಿ ಬಾಬಾ ದೇಗುಲಗಳಲ್ಲಿ ದೇವರುಗಳಿಗೆ ವಿಶೇಷ ಆಭರಣಗಳೊಂದಿಗೆ ಹೂವಿನ ಅಲಂಕಾರ ಮಾಡಲಾಗಿತ್ತು.
ತಾಲ್ಲೂಕಿನ ಚಿಕ್ಕತಿರುಪತಿಯ ಹೆಸರಾಂತ ಪುರಾತನ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ನೂತನ ವರ್ಷದ ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ತಾಲ್ಲೂಕು ಸೇರಿದಂತೆ ತಮಿಳುನಾಡಿನ ಹೊಸೂರು, ಕೃಷ್ಣಗಿರಿ ಹಾಗೂ ಬೆಂಗಳೂರು ಸುತ್ತ–ಮುತ್ತಲಿನ ಭಾಗಗಳಿಂದ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ದೇವಾಲಯ ಸಮಿತಿ ಹಂಗಾಮಿ ಅಧ್ಯಕ್ಷ ವೆಂಕಟೇಶ್ ಗೌಡ ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು.