‘ಕುರುಡು ಕವಿದಿರುವುದು ದೃಷ್ಟಿ. ಕಲಿಕೆಗೆ ಹಾಗೂ ಕನಸಿಗಲ್ಲ’ ಎಂದು ಮುದ್ದಾಗಿ ನುಡಿಯುವ ಡಿ.ನಂದಿನಿ 2017–18ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ 83 ಅಂಕಗಳೊಂದಿಗೆ ಉರ್ತೀರ್ಣಳಾಗಿದ್ದಾಳೆ.
ನಗರದ ಎಲೆಕ್ಟ್ರಾನಿಕ್ ಸಿಟಿ ನಿವಾಸಿ ನಂದಿನಿ ಕಳೆದ ಮೂರು ವರ್ಷಗಳಿಂದ ದೀಪಾ ಅಕಾಡೆಮಿ ನಡೆಸುತ್ತಿರುವ ‘ದೀಪಾ ಅಕಾಡೆಮಿ ಫಾರ್ ದಿ ಡೆಫರೆಂಟ್ಲಿ ಎಬೆಲ್ಡ್’ ಶಾಲೆಯಲ್ಲಿ ಓದುತ್ತಿದ್ದಾರೆ. ನಂದಿನಿ ಅವರ ತಾಯಿ ಗಾರ್ಮೆಂಟ್ ಉದ್ಯೋಗಿ, ತಂದೆ ಡ್ರೈವಿಂಗ್ ಶಾಲೆಯಲ್ಲಿ ಚಾಲನ ತರಬೇತುದಾರರಾಗಿ ಕೆಲಸಮಾಡುತ್ತಾರೆ.
ಹುಟ್ಟಿನಿಂದಲೇ ದೃಷ್ಟಿದೋಷವಿರುವ ನಂದಿನಿಗೆ ಬಣ್ಣಗಳನ್ನಷ್ಟೇ ಗುರುತಿಸುವ ಸಾಮರ್ಥ್ಯವಿದೆ. ಅಕ್ಷರಗಳನ್ನು ಗುರುತಿಸಲು ಇವರ ಅಸಮರ್ಥರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೇರೆಯವರ ಸಹಾಯದಿಂದ ಪರೀಕ್ಷೆ ಬರೆದಿದ್ದರು.
ಪಿಯುಸಿಯಲ್ಲಿ ಕಲಾವಿಭಾಗಕ್ಕೆ ಸೇರುವ ಹಂಬಲ ಹೊತ್ತ ಈ ಬಾಲಕಿಗೆ ಐಎಎಸ್ ಅಧಿಕಾರಿಯಾಗುವ ಆಸೆಯಿದೆ.
ದೀಪಾ ಅಕಾಡೆಮಿ ಬಗ್ಗೆ...
ದೀಪಾ ಅಕಾಡೆಮಿ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯಾಗಿದ್ದು ಕಳೆದ 12 ವರ್ಷಗಳಿಂದ ಅಂಧ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿದೆ. ಸಂಸ್ಥೆಯ ಕಚೇರಿ ಮಾಗಡಿ ರಸ್ತೆಯ ಭರತ್ನಗರದಲ್ಲಿದೆ. ಸದ್ಯ 60 ಜನ ದೃಷ್ಟಿದೋಷ ವಿದ್ಯಾರ್ಥಿಗಳಿಗೆ ಸಂಸ್ಥೆ ಆಶ್ರಯ ನೀಡಿದೆ. 8 ರಿಂದ 10ನೇ ತರಗತಿವರೆಗೆ ಸಂಸ್ಥೆಯೇ ಶಿಕ್ಷಣ ಕೇಂದ್ರವನ್ನು ನಡೆಸುತ್ತಿದೆ. ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸುತ್ತದೆ. ಮಾತ್ರವಲ್ಲದೆ ನಗರದ ವಿವಿದೆಡೆಗಳಲ್ಲಿರುವ ಸರ್ಕಾರಿ ಕಾಲೇಜುಗಳಿಗೆ ಸೇರಿಸಿ ಶಿಕ್ಷಣ ವೆಚ್ಚವನ್ನು ಭರಿಸುತ್ತದೆ.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಶಾಂತಾರಂ ಅವರೂ ಸ್ವತಃ ದೃಷ್ಟಿದೋಷ ಹೊಂದಿದ್ದಾರೆ. ದೀಪಾ ಅಕಾಡೆಮಿಯ ಸಿಬ್ಬಂದಿಗಳು ರಾಜ್ಯದ ವಿವಿಧ ಹಳ್ಳಿಗಳಿಗೆ ತೆರಳಿ ಆಪ್ತಸಮಾಲೋಚನೆಯ ಮೂಲಕ ಮಕ್ಕಳನ್ನು ಸಂಸ್ಥೆಗೆ ಸೇರಿಸಿಕೊಳ್ಳುತ್ತಾರೆ.
8ನೇ ತರಗತಿಯಿಂದ ಆ ವಿದ್ಯಾರ್ಥಿನಿಯರು ಎಲ್ಲಿಯವರೆಗೂ ಓದ ಬಯಸುತ್ತಾರೆಯೊ ಅಲ್ಲಿಯವರೆಗೆ ಸಂಸ್ಥೆಯೇ ಉಚಿತವಾಗಿ ಶಿಕ್ಷಣ ಕೊಡಿಸುತ್ತದೆ. ಉದ್ಯೋಗಕ್ಕೆ ಸೇರಲೂ ಸಂಸ್ಥೆ ನೆರವು ನೀಡುತ್ತಿದ್ದ. ಅಂಧ ವಿದ್ಯಾರ್ಥಿನಿಯರು
ಸ್ವತಂತ್ರ ಬದುಕು ಕಟ್ಟಿಕೊಳ್ಳಲು ಸಂಸ್ಥೆ ಸಹಕಾರಿಯಾಗಿದೆ.
ಸಂಪರ್ಕಕ್ಕೆ:9900481646
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.