ಜೌನ್ಪುರ(ಉತ್ತರ ಪ್ರದೇಶ): 2005ರ ಶ್ರಮಜೀವಿ ಎಕ್ಸ್ಪ್ರೆಸ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸ್ಥಳೀಯ ನ್ಯಾಯಾಲಯವು ಇಬ್ಬರನ್ನು ದೋಷಿ ಎಂದು ಆದೇಶಿಸಿದೆ.
ನಫಿಕುಲ್ ವಿಶ್ವಾಸ್ ಮತ್ತು ಹಿಲಾಲ್ ಅವರು ದೋಷಿಗಳೆಂದು ಆದೇಶಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ರಾಜೇಶ್ ರೈ, ಶಿಕ್ಷೆಯ ಪ್ರಮಾಣವನ್ನು 2024ರ ಜನವರಿ 2ರಂದು ಪ್ರಕಟಿಸಲಾಗುವುದು ಎಂದಿದ್ದಾರೆ ಎಂದು ಜಿಲ್ಲಾ ಸರ್ಕಾರಿ ವಕೀಲ ವೀರೇಂದ್ರ ಮೌರ್ಯ ತಿಳಿಸಿದ್ದಾರೆ.
2005ರ ಜುಲೈ 28ರಂದು ಸಂಜೆ 5 ಗಂಟೆ ಸುಮಾರಿಗೆ ಉತ್ತರ ಪ್ರದೇಶದ ಜೌನ್ಪುರ ರೈಲ್ವೆ ನಿಲ್ದಾಣದ ಬಳಿ ಪಾಟ್ನಾ–ನವದೆಹಲಿ ರೈಲಿನ ಕೋಚ್ನಲ್ಲಿ ಸ್ಫೋಟ ಸಂಭವಿಸಿ 14 ಜನರು ಮೃತಪಟ್ಟಿದ್ದರು ಹಾಗೂ 62 ಜನರು ಗಾಯಗೊಂಡಿದ್ದರು. ಸ್ಫೋಟಕ್ಕೆ ಆರ್ಡಿಎಕ್ಸ್ ಬಳಸಲಾಗಿತ್ತು.
‘ಜೌನ್ಪುರ ನಿಲ್ದಾಣದಲ್ಲಿ ಇಬ್ಬರು ಯುವಕರು ರೈಲು ಹತ್ತಿದ್ದರು. ಅವರ ಬಳಿ ಬಿಳಿಯ ಸೂಟ್ಕೇಸ್ ಇತ್ತು. ಕೆಲವೇ ಸಮಯದ ಬಳಿಕ ಅವರಿಬ್ಬರೂ ಚಲಿಸುತ್ತಿದ್ದ ರೈಲಿನಿಂದ ಹಾರಿ ಓಡಿ ಹೋದರು. ಆಗ ಅವರ ಬಳಿ ಸೂಟ್ಕೇಸ್ ಇರಲಿಲ್ಲ’ ಎಂದು ಸಾಕ್ಷಿಗಳು ಹೇಳಿದ್ದರು.