ಜಮ್ಮು: ಕಳೆದ ಐದು ದಿನಗಳಿಂದ ಪಾಕಿಸ್ತಾನದ ಕಡೆಯಿಂದ ಅನಿಯಮಿತವಾಗಿ ಶೆಲ್ ದಾಳಿ ನಡೆಯುತ್ತಿರುವ ಕಾರಣ ಜಮ್ಮು ಮತ್ತು ಕಾಶ್ಮೀರದ ಅವಳಿ ಜಿಲ್ಲೆಗಳಾದ ಪೂಂಛ್ ಹಾಗೂ ರಜೌರಿಯಲ್ಲಿ 400 ಬಂಕರ್ಗಳ ನಿರ್ಮಾಣಕ್ಕೆ ಜಮ್ಮು–ಕಾಶ್ಮೀರ ಆಡಳಿತ ಅನುಮೋದನೆ ನೀಡಿದೆ.
ತ್ವರಿತವಾಗಿ ಬಂಕರ್ ನಿರ್ಮಾಣ ಮಾಡುವಂತೆ ಸರ್ಕಾರ ನಿರ್ದೇಶನ ನೀಡಿದೆ. ಕಾಮಗಾರಿ ಕೈಗೆತ್ತಿಕೊಳ್ಳಲು ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಉಪ ಆಯುಕ್ತರಿಗೆ ಹಣವನ್ನು ಒದಗಿಸಲಾಗಿದೆ.
ಮುಂದಿನ ಒಂದು ತಿಂಗಳ ಒಳಗಾಗಿ ನಿಗದಿತ ಮಾನದಂಡದ ಪ್ರಕಾರ ಬಂಕರ್ ನಿರ್ಮಾಣವಾಗಲಿವೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಶೆಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಬಂಕರ್ಗಳು ಸಹಕಾರಿ ಎಂಬುದು ಸ್ಥಳೀಯರ ಅಭಿಪ್ರಾಯ. ಶೆಲ್ ದಾಳಿ ವೇಳೆ ಗಡಿಭಾಗದ ಗ್ರಾಮಸ್ಥರು ಬಂಕರ್ಗಳಲ್ಲಿಯೇ ಆಶ್ರಯ ಪಡೆಯುತ್ತಾರೆ.
ವಿಶೇಷ ಪ್ಯಾಕೇಜ್ಗೆ ಒತ್ತಾಯ
ಪಾಕಿಸ್ತಾನದ ಶೆಲ್ ದಾಳಿಯಿಂದ ನಾಲ್ವರು ನಾಗರಿಕರು ಮೃತಪಟ್ಟಿದ್ದಕ್ಕೆ ಪ್ರಮುಖ ಗುಜ್ಜರ್ ಮುಖಂಡ ಶಂಶೀರ್ ಹಕ್ಲಾ ಪೂಂಚಿ ಸಂತಾಪ ವ್ಯಕ್ತಪಡಿಸಿದ್ದಾರೆ. ಗಡಿನಿವಾಸಿಗಳಿಗಾಗಿ ಸುರಕ್ಷಿತ ಕಾಲೊನಿಗಳನ್ನು ನಿರ್ಮಿಸುವಂತೆ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಪಾಕಿಸ್ತಾನದ ವರ್ತನೆಯನ್ನು ಖಂಡಿಸಿರುವ ಅವರು, ‘ಶೆಲ್ ದಾಳಿಯಿಂದ ಗ್ರಾಮಸ್ಥರು ಭಾರಿ ತೊಂದರೆ ಅನುಭವಿಸುತ್ತಿದ್ದಾರೆ. ದಾಳಿಯಿಂದ ತಪ್ಪಿಸಿಕೊಂಡು ಶಾಂತಿಯುತ ಜೀವನ ಸಾಗಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಗಡಿವಾಸಿಗಳು ತಮ್ಮ ಜೀವ ಹಾಗೂ ಆಸ್ತಿಪಾಸ್ತಿಗಳನ್ನೂ ಲೆಕ್ಕಿಸದೆ ದೇಶಕ್ಕಾಗಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ’ ಎಂದಿದ್ದಾರೆ.
ಗಡಿನಿಯಂತ್ರಣ ರೇಖೆ ಸಮೀಪದ ಗ್ರಾಮಸ್ಥರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ಕುಡಿಯುವ ನೀರು, ಆಸ್ಪತ್ರೆ, ರಸ್ತೆ, ವಿದ್ಯುತ್ ಸಂಪರ್ಕ ಸೇರಿದಂತೆ ಸೇರಿದಂತೆ ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ’ ಎಂದು ಹೇಳಿದ್ದಾರೆ.
*ಗಡಿಭಾಗದಲ್ಲಿ ವಾಸುತ್ತಿರುವ ಜನರ ಕಲ್ಯಾಣಕ್ಕಾಗಿ ಪ್ರಧಾನಿ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು –ಶಂಶೀರ್ ಹಕ್ಲಾ ಪೂಂಚಿ,ಗುಜ್ಜರ್ ಮುಖಂಡ