ಮುಂಬೈ: ಭೀಮಾ ಕೋರೆಗಾಂವ್ ಹೋರಾಟ ವಿಜಯೋತ್ಸವದ 206ನೇ ವರ್ಷದ ನಿಮಿತ್ತ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರೆ ಕೆಲ ನಾಯಕರು ಯುದ್ಧ ಸ್ಮಾರಕ ‘ಜಯಸ್ತಂಭ’ಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ.
ಪೆರ್ನೆ ಗ್ರಾಮದಲ್ಲಿರುವ ಜಯಸ್ತಂಭ ಸ್ಮಾರಕ ಸ್ಥಳಕ್ಕೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್, ಎನ್ಸಿಪಿ ಸಂಸದ ಅಮೋಲ್ ಕೋಲ್ಹೆ ಹಾಗೂ ಬಹುಜನ ವಿಕಾಸ ಆಘಾಡಿಯ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಸೇರಿದಂತೆ ಅನೇಕರು ಭೇಟಿ ನೀಡಿದ್ದರು.
ಗಣ್ಯರ ಭೇಟಿ ಹಿನ್ನೆಲೆಯಲ್ಲಿ ಪುಣೆ- ಅಹ್ಮದ್ನಗರ ರಸ್ತೆಯಲ್ಲಿರುವ ಸ್ಮಾರಕದ ಸುತ್ತಮುತ್ತ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಸ್ಮಾರಕಕ್ಕೆ 10 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬರುವ ನಿರೀಕ್ಷೆ ಇದೆ ಎಂದು ಪುಣೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2018ರ ಜನವರಿ 1ರಂದು ಭೀಮಾ ಕೋರೆಗಾಂವ್ನಲ್ಲಿ ಹಿಂಸಾಚಾರ ನಡೆದಿತ್ತು. ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದರು.
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಮರಾಠ ಒಕ್ಕೂಟದ ಪೇಶ್ವೆ ಗುಂಪಿನ ನಡುವೆ 1818ರ ಜನವರಿ 1ರಂದು ಹೋರಾಟ ನಡೆದಿದ್ದು, ವಿಜಯೋತ್ಸವದ ಸ್ಮರಣಾರ್ಥ ಜಯಸ್ತಂಭ ಸ್ಮಾರಕ ಸ್ಥಾಪನೆಯಾಗಿದೆ.