ಶರಾವಸ್ತಿ, (ಉತ್ತರ ಪ್ರದೇಶ): ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರು ಸುರಕ್ಷಿತವಾಗಿ ಹೊರಬಂದ ದ್ದನ್ನು ಇಲ್ಲಿಯ ಮೋತಿಪುರ ಗ್ರಾಮಸ್ಥರು ಮಂಗಳವಾರ ರಾತ್ರಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸುರಂಗದಿಂದ ಹೊರಬಂದ 41 ಕಾರ್ಮಿಕರಲ್ಲಿ ಈ ಗ್ರಾಮದ ಆರು ಮಂದಿಯೂ ಇದ್ದದ್ದು ಈ ಸಂಭ್ರಮಕ್ಕೆ ಕಾರಣ.
ರಾಮ್ ಮಿಲನ್, ಅಂಕಿತ್, ಸತ್ಯದೇವ್, ಸಂತೋಷ್, ಜೈಪ್ರಕಾಶ್ ಮತ್ತು ರಾಮ್ ಸುಂದರ್ ಅವರು ಸುರಕ್ಷಿತವಾಗಿ ಮರಳುವುದನ್ನು ಗ್ರಾಮಸ್ಥರು ಕಾತುರದಿಂದ ಎದುರು ನೋಡುತ್ತಿದ್ದರು. ಅವರ ಸುರಂಗದಿಂದ ಹೊರಬಂದಿದ್ದಾರೆ ಎಂದು ತಿಳಿಯುತ್ತಿದ್ದಂತೆ ಎರಡನೇ ಬಾರಿಗೆ ದೀಪಾವಳಿ ಆಚರಿಸಿದರು.
‘ಆರು ಮಂದಿ ಸುರಂಗದಿಂದ ಹೊರಬಂದ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ತಮ್ಮ ಮನೆಗಳಿಂದ ಹೊರ ಬಂದು ಅಭಿನಂದಿಸಿದರು. ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಯಿತು. ಅವರೆಲ್ಲರೂ ಗ್ರಾಮಕ್ಕೆ ಮರಳಿದ ಬಳಿಕವೂ ದೀಪ ಹಚ್ಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಮತ್ತೊಮ್ಮೆ ದೀಪಾವಳಿ ಆಚರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ’ ಎಂದು ರಾಮ್ ಮಿಲನ್ ಅವರ ಮಗ ಸಂದೀಪ್ ಕುಮಾರ್ ತಿಳಿಸಿದ್ದಾರೆ.