ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜವಾಹರಲಾಲ್‌ ನೆಹರೂ ಪುಣ್ಯತಿಥಿ: ಪುಷ್ಪ ನಮನ ಸಲ್ಲಿಸಿದ ಕಾಂಗ್ರೆಸ್‌ ನಾಯಕರು

Published 27 ಮೇ 2024, 5:45 IST
Last Updated 27 ಮೇ 2024, 5:45 IST
ಅಕ್ಷರ ಗಾತ್ರ

ನವದೆಹಲಿ: ಇಂದು (ಸೋಮವಾರ) ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ 60ನೇ ಪುಣ್ಯತಿಥಿ. ಈ ಅಂಗವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರು ನೆಹರೂ ಅವರ ಸ್ಮಾರಕ 'ಶಾಂತಿವನ'ಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದ್ದಾರೆ.

ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಖರ್ಗೆ, 'ವೈಜ್ಞಾನಿಕ, ಆರ್ಥಿಕ, ಕೈಗಾರಿಕಾ ಮತ್ತು ವಿವಿಧ ಕ್ಷೇತ್ರಗಳಲ್ಲಿ ಭಾರತವನ್ನು ಮುನ್ನಡೆಸಿದ, ಪ್ರಜಾಪ್ರಭುತ್ವದ ಸಮರ್ಪಿತ ಕಾವಲುಗಾರ, ಸ್ವತಂತ್ರ ಭಾರತದ ಮೊದಲ ಪ್ರಧಾನಿ ಹಾಗೂ ಆಧುನಿಕ ಭಾರತದ ವಾಸ್ತುಶಿಲ್ಪಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಅನುಪಮ ಕೊಡುಗೆಯಿಲ್ಲದೆ ಭಾರತದ ಇತಿಹಾಸ ಅಪೂರ್ಣವಾಗಿದೆ. ಅವರು ಸ್ಫೂರ್ತಿಯ ಮೂಲ. ಪುಣ್ಯತಿಥಿಯಂದು ಅವರಿಗೆ ಗೌರವ ನಮನಗಳು' ಎಂದು ಬರೆದುಕೊಂಡಿದ್ದಾರೆ.

'ದೇಶದ ರಕ್ಷಣೆ, ಪ್ರಗತಿ ಮತ್ತು ಏಕತೆ ನಮ್ಮೆಲ್ಲರ ರಾಷ್ಟ್ರೀಯ ಧರ್ಮ. ನಾವು ವಿವಿಧ ಧರ್ಮಗಳನ್ನು ಅನುಸರಿಸಬಹುದು, ವಿವಿಧ ರಾಜ್ಯಗಳಲ್ಲಿ ವಾಸಿಸಬಹುದು, ವಿವಿಧ ಭಾಷೆಗಳನ್ನು ಮಾತನಾಡಬಹುದು. ಆದರೆ ಅದು ನಮ್ಮ ನಡುವೆ ಯಾವುದೇ ಗೋಡೆಯನ್ನು ಸೃಷ್ಟಿಸಬಾರದು. ದೇಶದಲ್ಲಿ ಕೆಲವರು ಶ್ರೀಮಂತರು ಮತ್ತು ಹೆಚ್ಚಿನವರು ಬಡವರಾಗಿರಬೇಕು ಎಂದು ನಾವು ಬಯಸುವುದಿಲ್ಲ. ಎಲ್ಲಾರೂ ಸಮಾನ ಅವಕಾಶ ಪಡೆಯಬೇಕು' ಎಂದು ನೆಹರೂ ಹೇಳಿದ್ದರು. ಇಂದಿಗೂ ಕಾಂಗ್ರೆಸ್ ಅದೇ ನ್ಯಾಯ ಮಾರ್ಗದಲ್ಲಿ ಸಾಗುತ್ತಿದೆ ಎಂದು ಖರ್ಗೆ ಹೇಳಿದ್ದಾರೆ.

'ಆಧುನಿಕ ಭಾರತದ ವಾಸ್ತುಶಿಲ್ಪಿ ಮತ್ತು ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯತಿಥಿಯಂದು ಗೌರವಪೂರ್ವಕ ನಮನಗಳು. ದಾರ್ಶನಿಕರಾಗಿ, ಅವರು ತಮ್ಮ ಇಡೀ ಜೀವನವನ್ನು ಸ್ವಾತಂತ್ರ್ಯ ಚಳವಳಿಗಾಗಿ ಮುಡಿಪಾಗಿಟ್ಟರು. ಅವರ ತತ್ವಗಳು ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತವೆ' ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ನೆಹರೂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ನಮನ ಸಲ್ಲಿಸಿದ ಸಿದ್ದರಾಮಯ್ಯ:

'ದೇಶದ ಮೊದಲ ಪ್ರಧಾನಿ, ವಿಶ್ವವೇ ಕೊಂಡಾಡಿದ ರಾಜಕೀಯ ಮುತ್ಸದ್ದಿ ಮತ್ತು ಕಾಂಗ್ರೆಸ್ ಪಕ್ಷದ ಹೆಮ್ಮೆಯ ನಾಯಕ ಪಂಡಿತ ಜವಾಹರಲಾಲ್‌ ನೆಹರೂ ಅವರನ್ನು ಅವರ ಪುಣ್ಯದಿನದಂದು ಗೌರವ ಮತ್ತು ಕೃತಜ್ಞತೆಯಿಂದ ನೆನೆಯೋಣ. ಗುಲಾಮಗಿರಿಯಿಂದ ಜರ್ಜರಿತವಾಗಿದ್ದ ಭಾರತವನ್ನು ಆರ್ಥಿಕ ಅಭಿವೃದ್ದಿ ಮತ್ತು ಸಾಮಾಜಿಕ ಸುಧಾರಣೆಯ ಕ್ರಮಗಳ ಮೂಲಕ ಸ್ವತಂತ್ರ, ಸ್ವಾವಲಂಬಿ‌ ಮತ್ತು ಜಾತ್ಯತೀತ ರಾಷ್ಟ್ರವನ್ನಾಗಿ ಕಟ್ಟಿದ ನೆಹರು ಅವರ ಜನಪರ ಕಾಳಜಿ, ದೇಶಭಕ್ತಿ ಮತ್ತು ಪುರೋಗಾಮಿ ಚಿಂತನೆಗಳು ನಮಗೆಲ್ಲ ಆದರ್ಶ ಮತ್ತು ಸ್ಪೂರ್ತಿದಾಯಕ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

'ಪ್ರಜಾಪ್ರಭುತ್ವ ವಿರೋಧಿ ಮತ್ತು ಕೋಮುವಾದಿ ಶಕ್ತಿಗಳು ಸುಳ್ಳು ಇತಿಹಾಸ ಮತ್ತು ಅಪಪ್ರಚಾರಗಳಿಂದ ದಮನಮಾಡಲು ಯತ್ನಿಸಿದಷ್ಟು ಪುಟಿದೆದ್ದು ಬಂದು ನಮ್ಮನ್ನು ಸೆಳೆಯುವ, ಸಲಹುವ ಮತ್ತು ಮಾರ್ಗದರ್ಶನ ನೀಡುವ ನೆಹರೂ ಅವರ ಚಿಂತನೆಯನ್ನು ಪಸರಿಸುವ ಮೂಲಕ ಅವರನ್ನು ಜೀವಂತವಾಗಿಡೋಣ' ಎಂದು ಬರೆದುಕೊಂಡಿದ್ದಾರೆ.

1947ರ ಆಗಸ್ಟ್‌ 15ರಂದು ಸ್ವಾತಂತ್ರ್ಯಭಾರತದ ಮೊದಲ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನೆಹರು ಅವರು 1964ರ ವರೆಗೂ ಅಧಿಕಾರದಲ್ಲಿದರು. ಅದೇ ವರ್ಷ ಮೇ 27ರಂದು ನಿಧನರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT