ನವದೆಹಲಿ: ಟ್ಯಾನರಿ ರಸ್ತೆಯಲ್ಲಿನ ಕಸಾಯಿಖಾನೆ ಬಳಿ ಇರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು (ಇಟಿಪಿ) ಮೇಲ್ದರ್ಜೆಗೇರಿಸಲಾಗುವುದು. ಕಸಾಯಿಖಾನೆಯ ತ್ಯಾಜ್ಯ ಹಲಸೂರು ಕೆರೆ ಸೇರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್ಜಿಟಿ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಿಳಿಸಿದೆ.
‘ಇಟಿಪಿಯನ್ನು ಮೇಲ್ದರ್ಜೆಗೇರಿಸುವ ಕಾರ್ಯ ಪೂರ್ಣಗೊಂಡ ಬಳಿಕ ತ್ಯಾಜ್ಯ ನೀರು ನೇರವಾಗಿ ಶುದ್ಧೀಕರಣ ಘಟಕವನ್ನು ಸೇರುವುದು. ಇದರಿಂದ ಯಾವುದೇ ತ್ಯಾಜ್ಯ ಇಟಿಪಿಯಲ್ಲಿ ಶೇಖರಣೆಯಾಗುವುದಿಲ್ಲ’ ಎಂದು ನ್ಯಾಯಮಂಡಳಿಯ ದಕ್ಷಿಣ ಪೀಠಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಬಿಬಿಎಂಪಿ ಆಯುಕ್ತ ಗೌರವ ಗುಪ್ತ ತಿಳಿಸಿದ್ದಾರೆ.
‘ಟ್ಯಾನರಿ ರಸ್ತೆಯಲ್ಲಿರುವ ಕಸಾಯಿಖಾನೆ ಹಾಗೂ 50 ಕೆಎಲ್ಡಿ ಸಾಮರ್ಥ್ಯದ ಇಟಿಪಿ ಘಟಕದ ಕಾರ್ಯಾರಂಭಕ್ಕಾಗಿ ಪರವಾನಗಿ ನವೀಕರಣ ಅಗತ್ಯವಿದ್ದು, ಈ ಸಂಬಂಧ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅರ್ಜಿ ಸಲ್ಲಿಸಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.
ಒಳಚರಂಡಿ ಹಾಗೂ ತ್ಯಾಜ್ಯಗಳು ಹಲಸೂರು ಕೆರೆಗೆ ಸೇರುತ್ತಿರುವ ಕಾರಣ, ಕೆರೆ ನೀರು ಕಲುಷಿತಗೊಳ್ಳುತ್ತಿದೆ ಎಂಬ ಬಗ್ಗೆ ಎನ್ಜಿಟಿಯ ದಕ್ಷಿಣ ಪೀಠವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು.