ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಚುನಾವಣೆ | ಮಹಾಘಟಬಂಧನಕ್ಕೆ ಸಿಗಲಿದೆಯೇ ಎಡ ಪಕ್ಷಗಳ ಬಲ?

Last Updated 27 ಆಗಸ್ಟ್ 2020, 8:00 IST
ಅಕ್ಷರ ಗಾತ್ರ

ಪಟಣಾ: ಕೊರೊನಾ ವೈರಸ್‌ ಕಾರಣಗಳಿಂದ ತೂಗುಯ್ಯಾಲೆಯಲ್ಲಿರುವ ಬಿಹಾರ ವಿಧಾನಸಭೆ ಚುನಾವಣೆಯು ನಿಗದಿತ ಸಮಯದಲ್ಲೇ ನಡೆಯುವುದೋ ಇಲ್ಲವೋ ಎಂಬುದು ಚುನಾವಣೆ ಆಯೋಗವು ಮತದಾನಕ್ಕೆ ವೇಳಾಪಟ್ಟಿ ಪ್ರಕಟಿಸಿದ ನಂತರ ಸ್ಪಷ್ಟವಾಗಲಿದೆ. ಈ ಮಧ್ಯೆ, ಆರಂಭಿಕ ಹಿನ್ನಡೆ ಅನುಭವಿಸಿದ್ದ ಘಟಬಂಧನಕ್ಕೆ ಸ್ವಲ್ಪ ಬಲ ಬರುತ್ತಿರುವ ಮುನ್ಸೂಚನೆ ಸಿಕ್ಕಿದೆ.

ಎಡಪಕ್ಷಗಳಾದ ಸಿಪಿಐ, ಸಿಪಿಎಂ ಮತ್ತು ಸಿಪಿಐ(ಎಂಎಲ್)ಗಳು ಮಹಾಘಟಬಂಧನಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಗಳಿವೆ. ಈ ಮೂಲಕ ಪ್ರತಿಪಕ್ಷಗಳ ಮತಗಳ ಕ್ರೂಢೀಕರಣದ ಮುನ್ಸೂಚನೆ ಸಿಕ್ಕಿದೆ. ಇದು ನೇರವಾಗಿ ಎನ್‌ಡಿಎಗೆ ಕಠಿಣ ಸವಾಲು ಎಸೆಯುವ ಬೆಳವಣಿಗೆಯೂ ಹೌದು.

ಎಡಪಕ್ಷಗಳು ಬಿಹಾರದಲ್ಲಿ ಒಂದಂಕಿಯ ಸ್ಥಾನಗಳಿಗೆ ಸೀಮಿತಗೊಂಡಿವೆಯಾದರೂ, ಹಲವು ಭಾಗಗಳಲ್ಲಿ ಪ್ರಭಾವ ಉಳಿಸಿಕೊಂಡಿವೆ ಎಂಬುದು ಗಮನಾರ್ಹ. ಬೆಗುಸರಾಯ್‌, ಮಧುಬಾನಿ, ಪೂರ್ಣಿಯಾ, ಜೆಹಾನಾಬಾದ್, ಭೋಜ್‌ಪುರ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ಅದರ ಹಿಡಿತವಿದೆ. ಒಂದುವೇಳೆ ಎಲ್ಲರೂ ಒಗ್ಗಟ್ಟಿನಿಂದ ಸ್ಪರ್ಧಿಸಿದರೆ ಹೋರಾಟವು ಸಮತೋಲನ ಸಾಧಿಸಿಕೊಳ್ಳುವ ಅವಕಾಶಗಳಿವೆ.

ಕಾಂಗ್ರೆಸ್‌, ಆರ್‌ಜೆಡಿ ನೇತೃತ್ವದ ಮಹಾಮೈತ್ರಿಯೊಳಗೆ ಎಡಪಕ್ಷಗಳೂ ಸೇರುವ ಸಾಧ್ಯತೆಗಳನ್ನು ಮಹಾಘಟಬಂಧನದ ಕನಿಷ್ಠ ಎರಡು ವಿಶ್ವಸನೀಯ ಮೂಲಗಳು ‘ಪ್ರಜಾವಾಣಿ’ಯ ಸೋದರ ಪತ್ರಿಕೆ ‘ಡೆಕ್ಕನ್‌ ಹೆರಾಲ್ಡ್‌’ಗೆ ತಿಳಿಸಿವೆ. ಬಿಜೆಪಿ ವಿರೋದಿ ರಾಜಕೀಯ ಶಕ್ತಿಗಳು ಎನ್‌ಡಿಎ ವಿರುದ್ಧ ಒಟ್ಟಾಗಬೇಕು ಎಂದು ರಾಹುಲ್‌ ಗಾಂಧಿ ಅವರು ಸೂಚಿಸಿರುವ ಹಿನ್ನೆಲೆಯಲ್ಲಿ ಎಡ ಪಕ್ಷಗಳು ಮಹಾಘಟಬಂಧನ ಸೇರಲಿವೆ ಎಂದು ಗೊತ್ತಾಗಿದೆ.

‘ಎಡ ಪಕ್ಷಗಳು ಮಹಾಘಟಬಂಧನ ಸೇರುವ ಪ್ರಕ್ರಿಯೆಗೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಈಗಾಗಲೇ ಅನುಮೋದನೆ ನೀಡಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್‌ನಿಂದ ಇನ್ನಷ್ಟೇ ಔಪಚಾರಿಕ ಅನುಮತಿ ಪಡೆಯಬೇಕಿದೆ. ರಾಷ್ಟ್ರದ ಹಳೇ ಪಕ್ಷವಾದ ಕಾಂಗ್ರೆಸ್‌, ತನ್ನ ಆಂತರಿಕ ಭಿನ್ನಾಭಿಪ್ರಾಯಗಳಿಂದ ಗೊಂದಲದ ಗೂಡಾಗಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ವಿಳಂಬವಾಗುತ್ತಿದೆ,’ ಎಂದು ಮಹಾಘಟಬಂಧನದ ಮೂಲಗಳು ತಿಳಿಸಿವೆ.

ಎನ್‌ಡಿಎ ಮಿತ್ರಕೂಟದ ಜೆಡಿಯು, ಬಿಜೆಪಿ ಮತ್ತು ಎಲ್‌ಜೆಪಿ ಒಗ್ಗಟ್ಟಾಗಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಹೋರಾಡಲಿವೆ ಎಂಬ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಹೇಳಿಕೆ ಹಿನ್ನೆಲೆಯಲ್ಲಿ ಮಹಾಘಟಬಂಧನದ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

ಬಿಹಾರದಲ್ಲಿ ಜೆಡಿಯು, ಬಿಜೆಪಿ ಮತ್ತು ಎಲ್‌ಜೆಪಿ ಈ ಮೂರು ಪಕ್ಷಗಳು ಒಟ್ಟಾರೆ ಶೇ. 39 ಮತಗಳನ್ನು ಹೊಂದಿದ್ದು, ಬಹುಮತಕ್ಕೆ ಎನ್‌ಡಿಎ ಹತ್ತಿರದಲ್ಲಿದ್ದಂತೆ ಕಾಣುತ್ತದೆ. ಮತ್ತೊಂದೆಡೆ, ಆರ್‌ಜೆಡಿ, ಕಾಂಗ್ರೆಸ್, ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ) ಮತ್ತು ಮುಖೇಶ್ ಸಾಹ್ನಿಯ ವಿಕಾಸ್-ಶೀಲ್ ಇನ್ಸಾನ್ ಪಕ್ಷವನ್ನು (ವಿಐಪಿ) ಒಳಗೊಂಡಿರುವ ಮಹಾಘಟಬಂಧನವು ಶೇ.32 ರಷ್ಟು ಮತಗಳನ್ನು ಹೊಂದಿದೆ.

‘ಬಿಹಾರದಾದ್ಯಂತ ಕಾರ್ಯಕರ್ತ ಪಡೆ ಹೊಂದಿರುವ, ಆದರೆ ಪ್ರತಿಪಕ್ಷಗಳ ಮತಗಳ ವಿಭಜನೆಯಿಂದಾಗಿ ಸ್ಥಾನಗಳನ್ನು ಪಡೆಯಲು ವಿಫಲವಾಗುತ್ತಿರುವ ಎಡ ಪಕ್ಷಗಳು ಘಟಬಂಧನ ಸೇರ್ಪಡೆಗೊಂಡರೆ ಮಹಾಮೈತ್ರಿ ಕೂಟದ ಬಾಹುಳ್ಯ ಹೆಚ್ಚಾಗಲಿದೆ. ಎಡಪಂಥೀಯರು ರಾಜ್ಯದಲ್ಲಿ ಕನಿಷ್ಠ ಶೇ.4 ಮತಗಳನ್ನು ಹೊಂದಿದ್ದಾರೆ. ಅವರ ಆಗಮನವು ಘಟಬಂಧನದ ಮತಗಳ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ. ಆ ಮೂಲಕ ಚುನಾವಣೆಯಲ್ಲಿ ಎನ್‌ಡಿಎಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆಗಳಿವೆ,’ ಎಂದು ಖ್ಯಾತ ರಾಜಕೀಯ ವಿಶ್ಲೇಷಕ ಅಜಯ್ ಕುಮಾರ್ ಅಭಿಪ್ರಾಯಪಟ್ಟರು.

ಘಟಕಬಂಧನದ ಮಿತ್ರಪಕ್ಷವಾಗಿದ್ದ ಮಾಜಿ ಮುಖ್ಯಮಂತ್ರಿ ಜಿತನ್‌ ರಾಮ್‌ ಮಾಂಝಿ ಅವರ ಹಿಂದೂಸ್ತಾನ್‌ ಹವಾಮ್‌ ಮೋರ್ಚಾ ಇತ್ತೀಚೆಗಷ್ಟೇ ಮೈತ್ರಿ ಕೂಟ ತೊರೆದಿತ್ತು. ಈ ಮೂಲಕ ಮಹಾಮೈತ್ರಿಗೆ ಆಘಾತ ನೀಡಿತ್ತು. ಈ ಮಧ್ಯೆ ಎಡ ಪಕ್ಷಗಳು ಮೈತ್ರಿಕೂಟ ಸೇರುತ್ತಿರುವುದು ಘಟಬಂಧನಕ್ಕೆ ಬಲ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT