ಭುವನೇಶ್ವರ: ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಎದುರಾದ ಸೋಲಿನ ಕಾರಣಗಳ ಪರಾಮರ್ಶೆ ನಡೆಸಲು ಬಿಜು ಜನತಾದಳ (ಬಿಜೆಡಿ) ಪಕ್ಷವು ಸಮಿತಿ ರಚಿಸಿದೆ.
147 ಸದಸ್ಯ ಬಲದ ಒಡಿಶಾ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ಸರಳ ಬಹುಮತ ಗಳಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದರೊಂದಿಗೆ ನಿರಂತರ 24 ವರ್ಷಗಳಿಂದ ಅಧಿಕಾರಲ್ಲಿದ್ದ ಬಿಜೆಡಿ ಸರ್ಕಾರ ಪತನಗೊಂಡಿದೆ.
ಪಕ್ಷದ ಅಧ್ಯಕ್ಷ ನವೀನ್ ಪಟ್ನಾಯಕ್ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಸಮಿತಿ ರಚನೆ ತೀರ್ಮಾನ ಕೈಗೊಳ್ಳಲಾಗಿದೆ. ಸೋಲಿನ ಕಾರಣಗಳ ಕುರಿತು ಸಮಿತಿಯು ಅಧ್ಯಕ್ಷರಿಗೆ ವರದಿ ನೀಡಲಿದೆ ಎಂದು ಕೇಂದ್ರಪರ ಕ್ಷೇತ್ರದ ಬಿಜೆಡಿ ಶಾಸಕ ಗಣೇಶ್ವರ್ ಬೆಹೆರಾ ತಿಳಿಸಿದ್ದಾರೆ.
ಸತತ ಐದು ಅವಧಿಗೆ ಮುಖ್ಯಮಂತ್ರಿಯಾಗಿದ್ದ ನವೀನ್ ಪಟ್ನಾಯಕ್ ಅವರು, ವಿಧಾನಸಭೆ ಸೋಲಿನ ಬೆನ್ನಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.