ನಾಗ್ಪುರ (ಪಿಟಿಐ): ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾವರ್ಕರ್ ಬಗ್ಗೆ ನೀಡಿರುವ ಹೇಳಿಕೆಯನ್ನು ಖಂಡಿಸಿ ಮಹಾರಾಷ್ಟ್ರದ ಬಿಜೆಪಿ ಶಾಸಕರು ಇಲ್ಲಿನ ವಿಧಾನಸಭೆಯ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
‘ನನಗೆ ಅನುಮತಿ ನೀಡಿದರೆ, ಬೆಳಗಾವಿಯ ಸುವರ್ಣಸೌಧದಲ್ಲಿರುವ ವಿ.ಡಿ. ಸಾವರ್ಕರ್ ಅವರ ಭಾವಚಿತ್ರ ತೆಗೆದುಹಾಕುತ್ತೇನೆ’ ಎಂದು ಪ್ರಿಯಾಂಕ್ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು.
ಇದನ್ನು ವಿರೋಧಿಸಿದ ಬಿಜೆಪಿ ಶಾಸಕರು, ವಿಧಾನಸಭೆಯ ಮೆಟ್ಟಿಲುಗಳ ಒಟ್ಟುಗೂಡಿ ಪ್ರತಿಭಟಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಶಿವಸೇನಾ (ಉದ್ಧವ್ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಇದಕ್ಕೆ ಪ್ರತಿಕ್ರಿಯೆ ನೀಡಬೇಕೆಂದು ಆಗ್ರಹಿಸಿದರು.