ನವದೆಹಲಿ: ‘ಪ್ರತಿ ವರ್ಷ 70 ಲಕ್ಷ ಜನರು ಸುಟ್ಟಗಾಯಗಳಿಂದ ಬಳಲುತ್ತಿದ್ದರೂ, ದೇಶದಲ್ಲಿ ಅತ್ಯಾಧುನಿಕ ಚಿಕಿತ್ಸಾ ಕೇಂದ್ರಗಳ ಕೊರತೆಯಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಭಾನುವಾರ ಹೇಳಿದರು.
ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ(ಏಮ್ಸ್) ಸ್ಥಾಪಿಸಿರುವ ಬರ್ನ್ಸ್ ಮತ್ತು ಪ್ಲಾಸ್ಟಿಕ್ ಸರ್ಜರಿ ಬ್ಲಾಕ್ ಉದ್ಘಾಟಿಸಿ ಅವರು ಮಾತನಾಡಿದರು.
‘ಸುಟ್ಟ ಗಾಯಗಳಿಂದ ಪ್ರತಿ ವರ್ಷ 1.4 ಲಕ್ಷ ಜನರು ಮೃತಪಡುತ್ತಿದ್ದಾರೆ. ಸುಟ್ಟ ಗಾಯವು ಉದ್ಯೋಗಿಗಳ ನಷ್ಟಕ್ಕೆ ಬಹುದೊಡ್ಡ ಕಾರಣವಾಗಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತದ ಆರ್ಥಿಕತೆಯಲ್ಲಿ ಇದು ಕಳವಳಕಾರಿಯಾದ ಅಂಶವಾಗಿದೆ. ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಗುಣಮಟ್ಟದ ಚಿಕಿತ್ಸಾ ಕೇಂದ್ರದ ಅಗತ್ಯವಿದೆ’ ಎಂದರು.
‘ಸುಟ್ಟಗಾಯಗಳ ಚಿಕಿತ್ಸೆ ಮತ್ತು ಸಂಶೋಧನಾ ಕ್ಷೇತ್ರದ ಬೆಳವಣಿಗಾಗಿ ಏಮ್ಸ್ನಲ್ಲಿ ಈ ಚಿಕಿತ್ಸಾ ಕೇಂದ್ರ ಪ್ರಾರಂಭಿಸಲಾಗಿದೆ. ಸರ್ಕಾರದ ಈ ಕ್ರಮವು ಜನರ ಅಗತ್ಯ ಮತ್ತು ಲಭ್ಯತೆಯ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ’ ಎಂದು ಹೇಳಿದರು.