ರಾಯ್ಪುರ: ಛತ್ತೀಸ್ಗಡದ ದಾಂತೇವಾಡ ಜಿಲ್ಲೆಯಲ್ಲಿ ಭಾನುವಾರ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲನೊಬ್ಬ ಹತನಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್ಜಿ) ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಗೆಂದು ಹೊರಟಿದ್ದಾಗ ಕಾಟೆಕಲ್ಯಾಣ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಗಾಡಂ ಮತ್ತು ಜುಂಗಂಪಾಲ್ ಗ್ರಾಮಗಳ ಮಧ್ಯದ ಅರಣ್ಯದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ದಾಂತೇವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.
‘ಗುಂಡಿನ ಚಕಮಕಿ ಮುಗಿದ ನಂತರ ನಕ್ಸಲ್ ವೆಟ್ಟಿ ಹಂಗಾ ಎಂಬಾತನಮೃತದೇಹ ಪತ್ತೆಯಾಯಿತು. ಸ್ಥಳದಲ್ಲಿ 8 ಎಂ.ಎಂ. ಪಿಸ್ತೂಲ್, ನಾಡಬಂದೂಕು, 2ಕೆ.ಜಿ. ಸುಧಾರಿತ ಸ್ಫೋಟಕ ಸಾಮಗ್ರಿ (ಐಇಡಿ), ಮಾವೋವಾದಿ ಬ್ಯಾಗ್, ಸಾಹಿತ್ಯ ಹಾಗೂ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದರು ಅವರು ಮಾಹಿತಿ ನೀಡಿದ್ದಾರೆ.
‘ಹಂಗಾ, ನಿಷೇಧಿತ ಮಾವೋವಾದಿಯ ಚಳವಳಿಯ ‘ಮಿಲಿಟಿಯಾ ಕಮಾಂಡರ್’ ಆಗಿದ್ದ. ಈತನ ತಲೆಗೆ ಸರ್ಕಾರ ₹ 1ಲಕ್ಷ ಬಹುಮಾನ ಘೋಷಿಸಿತ್ತು’ ಎಂದೂ ಪಲ್ಲವ ತಿಳಿಸಿದ್ದಾರೆ.