ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇರಳ: ಈದ್‌ ಪ್ರಾರ್ಥನೆಗೆ ಬಾಗಿಲು ತೆರೆದು ಸೌಹಾರ್ದ ಸಾರಿದ ಚರ್ಚ್‌

ಕೇರಳದ ಮಲಪ್ಪುರಂನ ಮಂಜೇರಿಯಲ್ಲಿ ಹೃದಯಸ್ಪರ್ಶಿ ಘಟನೆ
Published 11 ಏಪ್ರಿಲ್ 2024, 0:30 IST
Last Updated 11 ಏಪ್ರಿಲ್ 2024, 0:30 IST
ಅಕ್ಷರ ಗಾತ್ರ

ಮಲಪ್ಪುರಂ (ಕೇರಳ): ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೇರಿ ಚರ್ಚ್‌ ಬುಧವಾರ ಮುಸ್ಲಿಮರಿಗೆ ಈದ್‌ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿ ಹೃದಯಸ್ಪರ್ಶಿ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ಕೋಮುಸೌಹಾರ್ದದ ಸಂದೇಶವನ್ನೂ ಸಾರಿದೆ.

ಮಂಜೇರಿಯ ನಿಕೋಲಸ್‌ ಮೆಮೊರಿಯಲ್‌ ಸಿಎಸ್‌ಐ ಚರ್ಚ್‌ ಮುಂಭಾಗದ ವಿಶಾಲ ಆವರಣದಲ್ಲಿ ಪ್ರಾರ್ಥನೆಗಾಗಿ ಮುಸ್ಲಿಮರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ಮಂಜೇರಿಯ ಈದ್‌ ಜಂಟಿ ಸಮಿತಿಯು ಇಲ್ಲಿ ಪ್ರಾರ್ಥನೆ ಆಯೋಜಿಸಿತ್ತು. ಪ್ರತಿ ವರ್ಷ ಈದ್‌ ಪ್ರಾರ್ಥನೆ ನಡೆಯುತ್ತಿದ್ದ ಮಂಜೇರಿ ಪಟ್ಟಣದ ಸರ್ಕಾರಿ ಶಾಲೆಯ ಮೈದಾನವನ್ನು ಈ ಬಾರಿ ಲೋಕಸಭಾ ಚುನಾವಣೆ ಸಿದ್ಧತೆಯ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ. 

ಮುಸ್ಲಿಂ ಸಮುದಾಯದವರ ಈದ್‌ ಪ್ರಾರ್ಥನೆಗಾಗಿ ಆತಿಥ್ಯ ವಹಿಸುವ ಅವಕಾಶ ಸಿಕ್ಕಿರುವುದಕ್ಕೆ ಚರ್ಚ್‌ನ ಧರ್ಮಾಧಿಕಾರಿ ಫಾದರ್‌ ಜಾಯ್ ಮಸ್ಲಮನಿ ಅವರು ಸಂತಸ ವ್ಯಕ್ತಪಡಿಸಿದರು. ವಿಶೇಷವಾಗಿ ಧಾರ್ಮಿಕ ಉದ್ವಿಗ್ನತೆ ಕಾಣಿಸಿದ ಸಂದರ್ಭಗಳಲ್ಲಿ ಪ್ರೀತಿ ಮತ್ತು ಏಕತೆ ಮೂಡಿಸಬೇಕಾದ ಪ್ರಾಮುಖ್ಯತೆಯನ್ನು ಜಾಯ್‌ ಒತ್ತಿಹೇಳಿದರು.

ಈದ್‌ ಆಚರಣೆ ಸಮಿತಿ ಸದಸ್ಯ ಅಬ್ದುಲ್‌ ಅಲಿ, ಜಾತ್ಯತೀತ ಮನಸ್ಸಿನ ವ್ಯಕ್ತಿಗಳ ನಡುವೆ ಭಿನ್ನಾಭಿಪ್ರಾಯ ಬಿತ್ತಲು ಬಯಸುವ ವಿಭಜಕ ಶಕ್ತಿಗಳಿಗೆ ಇಂತಹ ಜಾತ್ಯತೀತ ಸ್ಥಳಗಳು ಪರಿಣಾಮಕಾರಿ ಸಂದೇಶ ರವಾನಿಸುತ್ತವೆ ಎಂದು ಪ್ರಶಂಸಿಸಿದರು. 

ಸಿರೋ-ಮಲಬಾರ್ ಕ್ಯಾಥೋಲಿಕ್ ಚರ್ಚ್‌ ಅಧೀನದ ವಿವಿಧ ಚರ್ಚ್‌ಗಳು, ಸುದೀಪ್ತೊ ಸೆನ್ ನಿರ್ದೇಶನದ ವಿವಾದಾತ್ಮಕ ಸಿನಿಮಾ ‘ದಿ ಕೇರಳ ಸ್ಟೋರಿ’ಯನ್ನು ಪ್ರದರ್ಶಿಸುತ್ತಿರುವಾಗ, ಚರ್ಚ್ ಆಫ್ ಸೌತ್ ಇಂಡಿಯಾ (ಸಿಎಸ್‌ಐ) ಅಧಿಕಾರಿಗಳ ಈ ನಡೆಯು ನಿಜವಾದ ‘ಕೇರಳ ಸ್ಟೋರಿ’ಯೆನಿಸಿದೆ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ. 

‘ಸಿಎಸ್‌ಐ ಚರ್ಚ್‌ನ ಒಗ್ಗಟ್ಟಿನ ಕಾರ್ಯವು ಧಾರ್ಮಿಕ ಗಡಿಗಳನ್ನು ಮೀರಿದೆ. ವೈವಿಧ್ಯಮಯ ಸಮುದಾಯಗಳ ನಡುವಿನ ಸಹಬಾಳ್ವೆ ಮತ್ತು ಪರಸ್ಪರರನ್ನು ಗೌರವಿಸುವ ಕೇರಳದ ಶ್ರೀಮಂತ ಸಂಪ್ರದಾಯವನ್ನು ನೆನಪಿಸುತ್ತದೆ’ ಎಂದೂ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂ–ಮುಸ್ಲಿಂ ಬಾಂಧವ್ಯದ ನೈಜ ‘ಕೇರಳ ಸ್ಟೋರಿ’

ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವ ಮಲಪ್ಪುರಂ ಜಿಲ್ಲೆಯ ಹಳ್ಳಿಯೊಂದರಲ್ಲಿನ ನೈಜ ಕಥೆ ಇದು. ಶತಮಾನಗಳ ಹಿಂದಿನ ದೇಗುಲವೊಂದು ಜೀರ್ಣೋದ್ಧಾರಗೊಂಡು ದೇವರ ಹೊಸ ವಿಗ್ರಹ ಪ್ರತಿಷ್ಠಾಪನೆಗೆ ಕಾದಿದೆ. ಇದರಲ್ಲೇನು ವಿಶೇಷ ಎನ್ನುತ್ತೀರಾ? ಈ ದೇಗುಲದ ಜೀರ್ಣೋದ್ಧಾರಕ್ಕೆ ದೇಣಿಗೆ ನೀಡಿದವರಲ್ಲಿ ಹೆಚ್ಚಿನವರು ನೆರೆಹೊರೆಯ ಮುಸ್ಲಿಮರು. ಕಟ್ಟುಕಥೆಗಳ ಅಪಪ್ರಚಾರ ಮತ್ತು ದ್ವೇಷದ ಭಾವನೆಗಳನ್ನು ಬಿತ್ತುವವರ ನಡುವೆ ಹಿಂದೂ–ಮುಸ್ಲಿಮರ ಬಾಂಧವ್ಯ ಸಾಮರಸ್ಯದ ನೈಜ ‘ಕೇರಳ ಸ್ಟೋರಿ’ಗೆ ಈ ಗ್ರಾಮ ಸಾಕ್ಷಿಯಾಗಿದೆ.  ಸುಮಾರು ನಾಲ್ಕು ಶತಮಾನಗಳಷ್ಟು ಹಳೆಯದಾದ ಶ್ರೀ ದುರ್ಗಾ ಭಗವತಿ ದೇವಸ್ಥಾನದ ನವೀಕರಣಕ್ಕಾಗಿ ಹಿಂದೂಗಳು ಮತ್ತು ಮುಸ್ಲಿಮರು ಕೈಜೋಡಿಸಿದ್ದಾರೆ. ಈ ದೇಗಲ ಕೊಂಡೊಟ್ಟಿಯ ಮುತುವಲ್ಲೂರಿನಲ್ಲಿ ನೆಲೆಗೊಂಡಿದ್ದು ಪುಣ್ಯಕ್ಷೇತ್ರವೆನಿಸಿದೆ.  ಜೀರ್ಣೋದ್ಧಾರಕ್ಕೆ ಇದುವರೆಗೆ ವಿನಿಯೋಗಿಸಿದ ಸುಮಾರು ₹50 ಲಕ್ಷದಲ್ಲಿ ಅರ್ಧದಷ್ಟು ಹಣವನ್ನು ಮುಸ್ಲಿಮರು ಉದಾರವಾಗಿ ದೇಣಿಗೆ ನೀಡಿದ್ದಾರೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಹಂತದ ನವೀಕರಣ ಬಹುತೇಕ ಪೂರ್ಣಗೊಂಡಿದೆ. 173 ಸೆಂ.ಮೀ ಎತ್ತರದ ದುರ್ಗಾ ದೇವಿಯ ವಿಗ್ರಹದ ಪ್ರತಿಷ್ಠಾಪನೆಯು ಮೇ 7ರಂದು ಪ್ರಾರಂಭವಾಗಿ ಮೂರು ದಿನಗಳ ಕಾಲ ನಡೆಯಲಿದೆ. ಸರ್ಕಾರಿ ಒಡೆತನದ ಮಲಬಾರ್ ದೇವಸ್ವಂ ಮಂಡಳಿಯ ಅಧೀನದ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರನ್ ಪಿ. ‘ದೇಗುಲದ ನವೀಕರಣವನ್ನು 2015ರಲ್ಲಿ ಪ್ರಾರಂಭಿಸಲಾಯಿತು. ನಾವು ಧಾರ್ಮಿಕ ಮತ್ತು ಕೋಮುಭೇದ ಮೀರಿ ಜನರಿಂದ ದೇಣಿಗೆ ಪಡೆದಿದ್ದೇವೆ. ಉದಾರ ದೇಣಿಗೆ ನೀಡಿದವರಲ್ಲಿ ಮುಸ್ಲಿಮರು ಪ್ರಮುಖರು ಎಂಬುದನ್ನು ತಿಳಿಸಲು ನಮಗೆ ಖುಷಿ ಇದೆ. ಜೀರ್ಣೋದ್ಧಾರಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬರು ವೈಯಕ್ತಿಕವಾಗಿ ₹2 ಲಕ್ಷ ನೀಡಿದರೆ ಮತ್ತೊಬ್ಬರು ₹1 ಲಕ್ಷ ದೇಣಿಗೆ ನೀಡಿರುವ ಉದಾಹರಣೆ ಇದೆ’ ಎಂದು ತಿಳಿಸಿದರು. ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ (ಐಯುಎಂಎಲ್) ಮುಖ್ಯಸ್ಥ ಸಾದಿಕ್ ಅಲಿ ಶಿಹಾಬ್ ತಂಗಳ್ ಮತ್ತು ಪಿ.ಕೆ. ಕುನ್ಹಾಲಿಕುಟ್ಟಿ ಅವರಂತಹ ಹಿರಿಯ ನಾಯಕರು ದೇಣಿಗೆ ನೀಡುವಂತೆ ನಾವು ಮಾಡಿದ ಕೋರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ದೇಗುಲದ ನವೀಕರಣಕ್ಕೆ ಎಲ್ಲ ರೀತಿಯ ಬೆಂಬಲ ನೀಡಿದರು’ ಎಂದು ಚಂದ್ರನ್ ಅವರು ಸಂತೋಷ ವ್ಯಕ್ತಪಡಿಸಿದರು.  ‘ಇದು ಹಿಂದೂಗಳು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಸೇರಿ ಎಲ್ಲಾ ಸಮುದಾಯಗಳು ಒಗ್ಗಟ್ಟಿನಿಂದ ಮತ್ತು ಸಂತೋಷದಿಂದ ವಾಸಿಸುವ ಸ್ಥಳವಿದು. ಯಾವುದೇ ಅಸೂಹೆಯ ಅಥವಾ ದ್ವೇಷದ ಪ್ರಚಾರವು ಈ ಸುದೀರ್ಘ ಸಾಮರಸ್ಯದ ಸಂಪ್ರದಾಯವಮ್ಮಿ ಛಿದ್ರಗೊಳಿಸಲು ಸಾಧ್ಯವಿಲ್ಲ’ ಎನ್ನುತ್ತಾರೆ ಚಂದ್ರನ್‌. ರಂಜಾನ್ ಸಮಯದಲ್ಲಿ ದೇವಾಲಯವು ತನ್ನ ಆವರಣದಲ್ಲಿ ಮುಸ್ಲಿಮರಿಗಾಗಿ ‘ನೊಂಬು ತುರ’ (ಉಪವಾಸ ಕೊನೆಗೊಳಿಸುವುದು) ಆಯೋಜಿಸಿತ್ತು. ಇದರಲ್ಲಿ ಹಿಂದೂ ಸಮುದಾಯದವರು ಸಹ ಸಂತೋಷದಿಂದ ಭಾಗವಹಿಸಿದ್ದರು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT