ನವದೆಹಲಿ: ಅಯೋಧ್ಯೆಯಲ್ಲಿ ಇದೇ 22ರಂದು ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ನೀಡಿರುವ ಆಹ್ವಾನವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾದ ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ಅವರು ‘ಗೌರವಪೂರ್ವಕವಾಗಿ ತಿರಸ್ಕರಿಸಿ ದ್ದಾರೆ’ ಎಂದು ಕಾಂಗ್ರೆಸ್ ಬುಧವಾರ ಹೇಳಿದೆ.
ಚುನಾವಣಾ ಲಾಭಕ್ಕಾಗಿ ಬಿಜೆಪಿ ಮತ್ತು ಆರ್ಎಸ್ಎಸ್ ಈ ಕಾರ್ಯಕ್ರಮವನ್ನು ‘ರಾಜಕೀಯ ಯೋಜನೆ’ಯಾಗಿ ಮಾಡಿಕೊಂಡಿವೆ ಎಂದು ಪಕ್ಷ ಆರೋಪಿಸಿದೆ.
ಉನ್ನತ ನಾಯಕರ ನಿರ್ಧಾರವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ಧಾರೆ. ಮಂದಿರ ಪೂರ್ಣ ಗೊಳ್ಳದಿದ್ದರೂ ಬಿಜೆಪಿ ಮತ್ತು ಆರ್ಎಸ್ಎಸ್ ನಾಯಕರು ಅದನ್ನು ಉದ್ಘಾಟಿಸಲು ಹೊರಟಿರುವ ಹಿಂದಿನ ಉದ್ದೇಶವೇನು ಎಂದೂ ಪ್ರಶ್ನಿಸಿದ್ದಾರೆ.
‘ದೇಶದ ಲಕ್ಷಗಟ್ಟಲೆ ಜನರು ರಾಮನನ್ನು ಪೂಜಿಸು ತ್ತಾರೆ. ಧರ್ಮವು ವೈಯಕ್ತಿಕ ವಿಚಾರ. ರಾಜಕೀಯ ಲಾಭಕ್ಕಾಗಿ ಅಪೂರ್ಣಗೊಂಡಿರುವ ಮಂದಿರದ ಉದ್ಘಾಟನೆಯನ್ನು ಬಿಜೆಪಿ,ಆರ್ಎಸ್ಎಸ್ ನಾಯಕರು ಕೈಗೊಳ್ಳುತ್ತಿದ್ದಾರೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಸುಪ್ರೀಂ ಕೋರ್ಟ್ 2019ರಲ್ಲಿ ನೀಡಿದ ತೀರ್ಪಿಗೆ ಬದ್ಧರಾಗಿ ಮತ್ತು ರಾಮನನ್ನು ಪೂಜಿಸುವ ಜನರ ಭಾವನೆಗಳನ್ನು ಗೌರವಿಸಿ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಅಧೀರ್ ರಂಜನ್ ಚೌಧರಿ ಅವರು ಆಹ್ವಾನವನ್ನು ಗೌರವಪೂರ್ವಕವಾಗಿ ತಿರಸ್ಕರಿಸಿ ದ್ದಾರೆ. ಇದು ಆರ್ಎಸ್ಎಸ್, ಬಿಜೆಪಿಯ ಕಾರ್ಯಕ್ರಮ’ ಎಂದು ಹೇಳಿದ್ದಾರೆ.