ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

G20 Summit | ‘ಮಂಟಪ’ದಲ್ಲಿ ‘ಡಿಜಿಟಲ್‌ ಮೂಲಸೌಕರ್ಯ’ಗಳ ಪ್ರದರ್ಶನ

Published 8 ಸೆಪ್ಟೆಂಬರ್ 2023, 14:10 IST
Last Updated 8 ಸೆಪ್ಟೆಂಬರ್ 2023, 14:10 IST
ಅಕ್ಷರ ಗಾತ್ರ

ನವದೆಹಲಿ: ಜಿ20 ಶೃಂಗಸಭೆಗೆ ‘ಭಾರತ ಮಂಪಟ’ ಸಜ್ಜುಗೊಂಡಿದ್ದರೆ, ಬ್ಯಾಂಕಿಂಗ್‌, ಆರೋಗ್ಯ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಅನುಷ್ಠಾನಗೊಳಿಸಿರುವ ಡಿಜಿಟಲ್ ಮೂಲಸೌಕರ್ಯಗಳ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ.

ಈ ವಿಷಯದಲ್ಲಿ ದೇಶದ ಸಾಧನೆಯನ್ನು ವಿಶ್ವನಾಯಕರ ಮುಂದಿಡುವ ಸಲುವಾಗಿ ಸಭಾಂಗಣ 4 ಮತ್ತು 14ರಲ್ಲಿ ಸ್ಥಾಪಿಸಿರುವ ‘ಡಿಜಿಟಲ್ ಇಂಡಿಯಾ ಎಕ್ಸ್‌ಪೀರಿಯನ್ಸ್ ಝೋನ್‌’ ಆಕರ್ಷಣೆಯ ತಾಣವೆನಿಸಿದೆ. ಜಿ20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಹಾಗೂ ಇತರ ಅತಿಥಿಗಳು ಈ ತಾಣಕ್ಕೆ ಭೇಟಿ ನೀಡುತ್ತಿದ್ದು, ‘ವರ್ಚುವಲ್ ರಿಯಾಲಿಟಿ’ ವಿಧಾನದಲ್ಲಿ ‘ಡಿಜಿಟಲ್‌ ಇಂಡಿಯಾ’ದ ಅನುಭವವನ್ನು ತುಂಬಿಕೊಳ್ಳುತ್ತಿದ್ದಾರೆ.

ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಭಾಷಾ ವೇದಿಕೆ ‘ಭಾಷಿಣಿ’, ಆಧಾರ್, ಡಿಜಿಲಾಕರ್, ದೀಕ್ಷಾ ಪೋರ್ಟಲ್‌ಗಳು ಗಮನ ಸೆಳೆಯುತ್ತಿವೆ.

‘ಇ–ಸಂಜೀವಿನಿ’ಯು ಡಿಜಿಟಲ್‌ ತಂತ್ರಜ್ಞಾನ ಬಳಸಿ, ಆರೋಗ್ಯ ಸೇವೆ ಒದಗಿಸುತ್ತಿರುವ ಭಾರತದ ಪ್ರಯತ್ನವನ್ನು ತೆರೆದಿಟ್ಟಿದೆ.

ದೆಹಯಲ್ಲಿ ಶುಕ್ರವಾರ ಸ್ಕೈಡೈವಿಂಗ್ ಮಾಡಿದ ವ್ಯಕ್ತಿಯು ಜಿ20 ಲಾಂಛನ ಧ್ಯೇಯವಾಕ್ಯವಿರುವ ಬಾವುಟ ಹಿಡಿದು ಗಮನ ಸೆಳೆದರು

ದೆಹಯಲ್ಲಿ ಶುಕ್ರವಾರ ಸ್ಕೈಡೈವಿಂಗ್ ಮಾಡಿದ ವ್ಯಕ್ತಿಯು ಜಿ20 ಲಾಂಛನ ಧ್ಯೇಯವಾಕ್ಯವಿರುವ ಬಾವುಟ ಹಿಡಿದು ಗಮನ ಸೆಳೆದರು

–ಪಿಟಿಐ ಚಿತ್ರ

‘ಭಾರತ ಮಂಟಪ’ದಲ್ಲಿ ಪ್ರದರ್ಶಿಸಲಾಗುತ್ತಿರುವ ಈ ಡಿಜಿಟಲ್‌ ಮೂಲಸೌಕರ್ಯಗಳನ್ನು ವಿವರಿಸುವ ವಿಡಿಯೊಯೊಂದನ್ನು ‘ಎಕ್ಸ್‌’ನಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿ ವ್ಯವಸ್ಥೆ ಮಾಡಲಾಗಿರುವ ಪ್ರದರ್ಶನ ಕುರಿತು ಜಿ20 ಮುಖ್ಯ ಸಮನ್ವಯಾಧಿಕಾರಿ ಹರ್ಷವರ್ಧನ ಶ್ರಿಂಗ್ಲಾ ಅವರು ವಿವರಣೆ ನೀಡುತ್ತಿರುವುದನ್ನು ಸಹ ವಿಡಿಯೊ ಒಳಗೊಂಡಿದೆ.

15ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆಗಳಲ್ಲಿ ಮೋದಿ ಭಾಗಿ
ಜಿ20 ಶೃಂಗಸಭೆ ಸಂದರ್ಭದಲ್ಲಿಯೇ ವಿಶ್ವದ ಪ್ರಮುಖ ನಾಯಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು 15ಕ್ಕೂ ಹೆಚ್ಚು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಬ್ರಿಟನ್‌ ಜಪಾನ್‌ ಜರ್ಮನಿ ಹಾಗೂ ಇಟಲಿ ನಾಯಕರೊಂದಿಗೆ ಮೋದಿ ಶನಿವಾರ ಸಭೆ ನಡೆಸುವರು. ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್‌ ಅವರೊಂದಿಗೆ ಭಾನುವಾರ ಸಭೆ ನಡೆಸುವರು ಎಂದು ಮೂಲಗಳು ಹೇಳಿವೆ. ಕೆನಡಾ ಟರ್ಕಿ ಯುಎಇ ದಕ್ಷಿಣ ಕೊರಿಯಾ ಐರೋಪ್ಯ ಒಕ್ಕೂಟ ಬ್ರೆಜಿಲ್ ಹಾಗೂ ನೈಜೀರಿಯಾ ಮುಖಂಡರೊಂದಿಗೆ ಕೂಡ ಮೋದಿ ಪ್ರತ್ಯೇಕ ಸಭೆಗಳನ್ನು ನಡೆಸುವರು ಎಂದೂ ಹೇಳಿವೆ.
ರಾಷ್ಟ್ರಪತಿ ಔತಣಕೂಟಕ್ಕೆ ದೇವೇಗೌಡ ಮನಮೋಹನ್‌ ಸಿಂಗ್‌ ಗೈರು
ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ಜಾಗತಿಕ ನಾಯಕರಿಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಆಯೋಜಿಸಿರುವ ಔತಣಕೂಟದಲ್ಲಿ ಮಾಜಿ ಪ್ರಧಾನಿಗಳಾದ ಮನಮೋಹನ್‌ ಸಿಂಗ್‌ ಎಚ್‌.ಡಿ.ದೇವೇಗೌಡ ಅವರು ಪಾಲ್ಗೊಳ್ಳುತ್ತಿಲ್ಲ. ಆರೋಗ್ಯ ಸಮಸ್ಯೆಯಿಂದಾಗಿ ಈ ಇಬ್ಬರು ಮಾಜಿ ಪ್ರಧಾನಿಗಳು ಔತಣಕೂಟದಲ್ಲಿ ಭಾಗಿಯಾಗುತ್ತಿಲ್ಲ ಎಂದು ಮೂಲಗಳು ಹೇಳಿವೆ. ಜಿ20 ಶೃಂಗಸಭೆಗೆ ಯಶಸ್ಸು ಕೋರಿ ದೇವೇಗೌಡ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಸಿಂಗ್‌ ಮಾನ್ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖ್ಖು ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಪಾಲ್ಗೊಳ್ಳುವರು. ಛತ್ತೀಸಗಢ ಮತ್ತು ರಾಜಸ್ಥಾನ ಮುಖ್ಯಮಂತ್ರಿಗಳು ಪಾಲ್ಗೊಳ್ಳುವುದು ಖಚಿತವಾಗಿಲ್ಲ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳುತ್ತಿಲ್ಲ ಎಂದು ಅವರ ಆಪ್ತ ಮೂಲಗಳು ಹೇಳಿವೆ. ಖರ್ಗೆಗೆ ನೀಡದ ಆಹ್ವಾನ: ರಾಹುಲ್ ಕಿಡಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ಔತಣಕೂಟಕ್ಕೆ ಆಹ್ವಾನಿಸಿಲ್ಲ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. ‘ಅವರು ವಿರೋಧ ಪಕ್ಷದ ನಾಯಕನನ್ನು ಆಹ್ವಾನಿಸದಿರಲು ನಿರ್ಧರಿಸಿದ್ದಾರೆ. ಇದು ಬೇರೆ ಏನನ್ನೋ ಹೇಳುತ್ತದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ‘ದೇಶದ ಶೇ 60ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುವ ನಾಯಕನಿಗೆ ಅವರು ಗೌರವ ನೀಡುತ್ತಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಈ ಬಗ್ಗೆ ಜನರು ಯೋಚಿಸಬೇಕು’ ಎಂದು ವಿದೇಶ ಪ್ರವಾಸದಲ್ಲಿರುವ ಅವರು ಬ್ರುಸೆಲ್ಸ್‌ನಲ್ಲಿ ಸುದ್ದಿಗಾರರಿಗೆ ಹೇಳಿದ್ದಾರೆ.
‘ಚೇಂಜ್‌ ಆಫ್‌ ಗಾರ್ಡ್’ ಇಲ್ಲ
ಜಿ20 ಶೃಂಗಸಭೆ ಕಾರಣದಿಂದಾಗಿ ರಾಷ್ಟ್ರಪತಿ ಭವನದಲ್ಲಿ ಭದ್ರತಾ ಪಡೆಗಳ ಸಾಂಪ್ರದಾಯಿಕ ಸಮಾರಂಭ ‘ಚೇಂಜ್‌ ಆಫ್‌ ಗಾರ್ಡ್‌’ ಶನಿವಾರ ನಡೆಯುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ. ರಾಷ್ಟ್ರಪತಿಗಳ ಅಂಗರಕ್ಷಕರನ್ನು ಒಳಗೊಂಡ ಹೊಸ ಪಡೆಗೆ ಅಧಿಕಾರ ಹಸ್ತಾಂತರ ಮಾಡುವ ಕಾರ್ಯಕ್ರಮ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT