ನವದೆಹಲಿ: ಸಂದೇಸರ ಬ್ರದರ್ಸ್ ಬ್ಯಾಂಕ್ ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರನ್ನು 2ನೇ ಬಾರಿಗೆ ವಿಚಾರಣೆಗೆ ಒಳಪಡಿಸಿತು.
ಇ.ಡಿಯ ಮೂವರು ಸದಸ್ಯರ ತಂಡ ಹಾಗೂ ಇತರೆ ಅಧಿಕಾರಿಗಳು ಕೇಂದ್ರ ದೆಹಲಿಯಲ್ಲಿರುವ ಪಟೇಲ್ ಅವರ ನಿವಾಸಕ್ಕೆ ಬೆಳಿಗ್ಗೆ ಬಂದಿದ್ದರು. ಕೋವಿಡ್ ಹಿನ್ನೆಲೆಯಲ್ಲಿ ಮಾಸ್ಕ್ ಮತ್ತು ಕೈಗವುಸುಗಳನ್ನು ತೊಟ್ಟಿದ್ದರು.
ಜೂನ್27ರಂದು ಅಹ್ಮದ್ ಪಟೇಲ್ ಅವರನ್ನು ಮೊದಲ ಬಾರಿಗೆ ವಿಚಾರಣೆಗೆ ಒಳಪಡಿಸಲಾಗಿತ್ತು. ರಾಜ್ಯಸಭೆ ಸದಸ್ಯರಾದ 79 ವರ್ಷದ ಅಹ್ಮದ್ ಪಟೇಲ್ ಅವರು, ಕೋವಿಡ್ ಹಿನ್ನೆಲೆಯಲ್ಲಿ ಇ.ಡಿ ಕಚೇರಿಗೆ ಹೋಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ವಿಚಾರಣೆ ನಡೆಸಲು ಒಪ್ಪಲಾಗಿತ್ತು.
ಪ್ರಕರಣದ ಸಂಬಂಧ ಪಟೇಲ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.