ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer| ಅತೀಕ್‌, ಅಶ್ರಫ್, ಅಸಾದ್‌ ಶೂಟೌಟ್: ಪಾತಕಲೋಕದ ಭಯಾನಕ ಮಾಹಿತಿ..!

Last Updated 16 ಏಪ್ರಿಲ್ 2023, 13:46 IST
ಅಕ್ಷರ ಗಾತ್ರ

ಲಖನೌ: ಪಾತಕಿ–ಮಾಜಿ ಸಂಸದ ಅತೀಕ್‌ ಅಹ್ಮದ್, ಆತನ ಪುತ್ರ ಹಾಗೂ ಸಹೋದರನ ಹತ್ಯೆ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ರಾಜಕೀಯ ಪಕ್ಷಗಳಲ್ಲಿ ಪರ–ವಿರೋಧಗಳ ಕಾವೇರಿದ ಚರ್ಚೆ ನಡೆಯುತ್ತಿದ್ದು, ಈ ಘಟನೆ ಉತ್ತರ ಪ್ರದೇಶದಲ್ಲಿ ರಾಜಕೀಯವಾಗಿ ಹೊಸ ಆಯಾಮ ಪಡೆದುಕೊಂಡಿದೆ.

ಪ್ರಯಾಗ್‌ರಾಜ್‌ನಲ್ಲಿ ಜನಿಸಿದ ಅತೀಕ್‌ ಅಹ್ಮದ್ ಚಿಕ್ಕ ವಯಸ್ಸಿನಲ್ಲೇ ಮಾಫಿಯಾ ಲೋಕ ಸೇರಿದ್ದು ವಿಶೇಷ. 18ನೇ ವಯಸ್ಸಿಗೆ ಕೊಲೆ ಮಾಡಿದ ಆರೋಪ ದಾಖಲಾಗಿತ್ತು. ನಂತರದ ದಿನಗಳಲ್ಲಿ ಪ್ರಯಾಗ್‌ರಾಜ್‌ನ ಗ್ಯಾಂಗ್‌ಸ್ಟರ್ ಎಂದೇ ಗುರುತಿಸಿಕೊಂಡು ರಾಜಕೀಯ ಸೇರಿ ಈ ಭಾಗದಲ್ಲಿ ಮತ್ತಷ್ಟು ಖ್ಯಾತನಾದ.

ಮೊದಲಿಗೆ ಪಕ್ಷೇತರ ಶಾಸಕನಾಗಿ ಆಯ್ಕೆಯಾಗಿ ನಂತರ ಬಿಎಸ್‌ಪಿ, ಆಪ್ನ ದಳ, ಸಮಾಜವಾದಿ ಪಕ್ಷ ಸೇರಿದರು. ಅಲಹಾಬಾದ್ ಪಶ್ಚಿಮ ಕ್ಷೇತ್ರದಿಂದ ಸತತ ಐದು ಬಾರಿ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಅತೀಕ್‌ ದಾಖಲೆ ಮಾಡಿದ. 2004ರಿಂದ 2009ರವರೆಗೆ ಸಮಾಜವಾದಿ ಪಕ್ಷದಿಂದ ಸಂಸದನಾಗಿ ಆಯ್ಕೆಯಾದ.

ಅತೀಕ್‌ ವಿರುದ್ಧ ಉತ್ತರ ಪ್ರದೇಶದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 100ಕ್ಕೂ ಹೆಚ್ಚು ಎಫ್‌ಐಆರ್‌ಗಳು, ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅತೀಕ್‌ ವಿರುದ್ಧ 57ಕ್ಕೂ ಹೆಚ್ಚು ಎಫ್‌ಐಆರ್‌ ದಾಖಲಾಗಿವೆ. ಇವುಗಳಲ್ಲಿ ಲೈಂಗಿಕ ದೌರ್ಜನ್ಯ, ಅಪಹರಣ, ದಬ್ಬಾಳಿಕೆ, ಕೊಲೆ, ಹತ್ಯೆ ಯತ್ನ, ಭೂಕಬಳಿಕೆ ಪ್ರಕರಣಗಳು ಸೇರಿವೆ.

ಬಿಎಸ್‌ಪಿಯ ಮಾಜಿ ಶಾಸಕ ರಾಜು ಪಾಲ್‌ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್‌ ಪಾಲ್‌ ಕೊಲೆ ಪ್ರಕರಣದಲ್ಲಿ ಅತೀಕ್‌ ಮತ್ತು ಅಶ್ರಫ್ ಪ್ರಮುಖ ಆರೋಪಿಗಳಾಗಿದ್ದರು. ಈ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು ಅತಿಕ್‌ ಮತ್ತು ಅಶ್ರಫ್‌ನನ್ನು ಬಂಧಿಸಿದ್ದರು.

ಪ್ರಯಾಗ್‌ರಾಜ್‌ನಲ್ಲಿ ಶನಿವಾರ ರಾತ್ರಿ ಪೊಲೀಸರ ಬಿಗಿ ಭದ್ರತೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಕರೆತರುತ್ತಿರುವಾಗ ಇವರು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದರು. ಇವರ ಮೇಲೆ ಗುಂಡಿನ ದಾಳಿ ನಡೆಸಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜ್‌ ಪಾಲ್‌ ಹತ್ಯೆ ಪ್ರಕರಣ ಏನು?

ಅತೀಕ್‌ ಅಹ್ಮದ್‌ ಫುಲ್ಬಾರ್ ಲೋಕಸಭಾ ಕ್ಷೇತ್ರದ ಸಂಸದನಾಗಿದ್ದ ಸಂದರ್ಭದಲ್ಲಿ ಈ ಕ್ಷೇತ್ರ ವ್ಯಾಪ್ತಿಗೆ ಬರುವ ಅಲಹಾಬಾದ್ (ಪಶ್ಚಿಮ) ವಿಧಾನಸಭೆಗೆ ಉಪ ಚುನಾವಣೆ ನಡೆದಿತ್ತು. ಇಲ್ಲಿ ಅತೀಕ್‌ ಸಹೋದರ ಅಶ್ರಫ್ ಸ್ಪರ್ಧಿಸಿದ್ದ. ಬಿಎಸ್‌ಪಿಯಿಂದ ರಾಜು ಪಾಲ್‌ ಕೂಡ ಸ್ಪರ್ಧೆ ಮಾಡಿದ್ದರು. ಈ ಚುನಾವಣೆಯಲ್ಲಿ ರಾಜು ಪಾಲು ಅವರು ಅಶ್ರಪ್​ನನ್ನು ಸೋಲಿಸಿದ್ದರು.

ಶಾಸಕನಾಗಿ ಆಯ್ಕೆಯಾಗಿ ಮೂರೇ ತಿಂಗಳಿಗೆ ರಾಜು ಪಾಲ್ ಕೊಲೆ ನಡೆದಿತ್ತು. ಉಮೇಶ್‌ ಪಾಲ್‌ ಎಂಬುವರು ಈ ಕೊಲೆಯ ಪ್ರತ್ಯಕ್ಷದರ್ಶಿಯಾಗಿದ್ದರು. ನಂತರದ ದಿನಗಳಲ್ಲಿ ಉಮೇಶ್‌ ಪಾಲ್‌ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಕೊಲೆ ಹಿಂದೆ ಅತೀಕ್‌ ಹಾಗೂ ಆಶ್ರಪ್‌ ಕೈವಾಡವಿದೆ ಎಂದು ಪೊಲೀಸರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿದ್ದರು.

ಮೂಲಗಳ ಪ್ರಕಾರ ಅತೀಕ್‌ಗೆ ಮೂವರು ಮಕ್ಕಳು. ಇವರಲ್ಲಿ ಕಿರಿಯ ಪುತ್ರ ಅಸಾದ್‌ ಅಹ್ಮದ್‌ ಉಮೇಶ್‌ ಪಾಲ್ ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ. ಕಳೆದ ಮೂರ ದಿನಗಳ ಹಿಂದೆ ಝಾನ್ಸಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಅಸಾದ್‌ ಹಾಗೂ ಅವನ ಸಹಚರ ಗುಲಾಮ್‌ನನ್ನು ಪೊಲೀಸರು ಹತ್ಯೆ ಮಾಡಿದ್ದಾರೆ.

ಅತೀಕ್‌ ಪತ್ನಿ ಶೈಸ್ತಾ ಪರ್ವೀನ್‌ ವಿರುದ್ಧ 7 ಎಫ್‌ಐಆರ್‌ ಪ್ರಕರಣಗಳು ದಾಖಲಾಗಿವೆ. ಶೈಸ್ತಾ ಪರ್ವೀನ್‌ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ. ಪರ್ವೀನ್‌ ಸುಳಿವು ನೀಡಿದವರಿಗೆ ₹ 50 ಸಾವಿರ ಬಹುಮಾನ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದಾರೆ. ಸದ್ಯ ಪರ್ವೀನ್‌ ತಲೆ ಮರೆಸಿಕೊಂಡಿದ್ದಾರೆ.

ಅತೀಕ್‌ನ ಮತ್ತಿಬ್ಬರು ಮಕ್ಕಳಾದ ಉಮರ್‌ ಮತ್ತು ಅಲಿ ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿ ಜೈಲುನಲ್ಲಿದ್ದಾರೆ. ಇವರ ಮಕ್ಕಳ ಸರ್ಕಾರದ ವಸತಿ ನಿಲಯಗಳಲ್ಲಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅತೀಕ್‌ ಮತ್ತು ಅಶ್ರಫ್ ಹತ್ಯೆ ಕುರಿತು ಉನ್ನತ ಮಟ್ಟದ ತನಿಖೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT