ಇಂದು, ಪ್ರಧಾನಿ ನರೇಂದ್ರ ಮೋದಿ ಅವರ 69ನೇ ಮಾಸಿಕ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮ. ಈ ತಿಂಗಳ ಮನ್ ಕಿ ಬಾತ್ ನಲ್ಲಿ ರೈತರ ಕುರಿತು ಮೋದಿ ಮಾತನಾಡಿದ್ದಾರೆ.ಮನ್ ಕಿ ಬಾತ್ನ ಮತ್ತಷ್ಟು ಮಾಹಿತಿ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ನಲ್ಲಿ ಕೃಷಿ ಮಸೂದೆಯ ಲಾಭಗಳನ್ನು ಉಲ್ಲೇಖಿಸಿದ್ದಾರೆ. ತಮ್ಮ ಉತ್ಪನ್ನಗಳನ್ನು ಮಂಡಿಗಳ ಹೊರಗೆ ಮಾರಾಟ ಮಾಡುವ ಸ್ವಾತಂತ್ರ್ಯದ ಬಗ್ಗೆ ಮೋದಿ ರೈತರಿಗೆ ಸಂದೇಶ ನೀಡಿದ್ದಾರೆ.
ಆತ್ಮನಿರ್ಭರ ಭಾರತ ನಿರ್ಮಾಣದ ಪ್ರಯತ್ನಗಳಲ್ಲಿ ರೈತರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ರೈತರು ತಮ್ಮ ಉತ್ಪನ್ನಗಳನ್ನು ತಮಗೆ ಇಷ್ಟಬಂದ ಜಾಗದಲ್ಲಿ, ಇಷ್ಟಬಂದ ಬೆಲೆಗೆ ಮಾರಾಟ ಮಾಡುವ ಸ್ವಾತಂತ್ರ್ಯ ಮತ್ತು ಶಕ್ತಿಯನ್ನು ಪಡೆದಿದ್ದಾರೆ ಎಂದು ಪಿಎಂ ಮೋದಿ ಹೇಳಿದ್ದಾರೆ.
ತಂತ್ರಜ್ಞಾನದ ಹೆಚ್ಚಿನ ಬಳಕೆಯಿಂದ ಕೃಷಿ ಕ್ಷೇತ್ರಕ್ಕೆ ಅಪಾರ ಲಾಭವಾಗಲಿದೆ. ಕೆಲ ವರ್ಷಗಳ ಹಿಂದೆ ಹಲವು ರಾಜ್ಯಗಳಲ್ಲಿ ಎಪಿಎಂಸಿ ಕಾಯ್ದೆಯಿಂದ ತರಕಾರಿ, ಹಣ್ಣುಗಳನ್ನು ಹೊರಗಿಡಲಾಯಿತು. ಇದರಿಂದ ರೈತರು ಲಾಭ ಗಳಿಸಿದರು ಎಂದು ಪ್ರಧಾನಿ ತಿಳಿಸಿದರು.
ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತದ ಕೃಷಿ ಕ್ಷೇತ್ರದ ಸಾಮರ್ಥ್ಯ ಪ್ರದರ್ಶನ ಮಾಡಿತ್ತು ಎಂದರು.
ಗಾಂಧಿ ತತ್ವ ಪಾಲಿಸಿದ್ದಿದ್ದರೆ...
ನಾವು ಮಹಾತ್ಮ ಗಾಂಧಿಯವರ ಆರ್ಥಿಕ ತತ್ತ್ವಶಾಸ್ತ್ರವನ್ನು ಅನುಸರಿಸಿದ್ದಿದ್ದರೆ, ಇಂದು ‘ಆತ್ಮನಿರ್ಭರಭಾರತ್’ ಅಭಿಯಾನ ಅಗತ್ಯವಿರಲಿಲ್ಲ. ಭಾರತ ಎಂದೋ ಸ್ವಾವಲಂಬಿಯಾಗುತ್ತಿತ್ತುಎಂದು ಮೋದಿ ಹೇಳಿದ್ದಾರೆ.
ಕತೆ ನಿರೂಪಣೆ ವಿಚಾರದೊಂದಿಗೆ ಮನ್ ಕಿ ಬಾತ್ ಆರಂಭ
ಪ್ರಧಾನ ಮಂತ್ರಿ ತಮ್ಮ ಮಾಸಿಕ ರೆಡಿಯೊ ಕಾರ್ಯಕ್ರಮವನ್ನು ‘ಕತೆ ನಿರೂಪಣೆ’ ವಿಷಯದೊಂದಿಗೆ ಆರಂಭಿಸಿದರು. ‘ಕತೆ ನಿರೂಪಣೆಯು ಶತಮಾನಗಳಿಂದ ನಮ್ಮ ರಾಷ್ಟ್ರದ ಒಂದು ಭಾಗವಾಗಿದೆ. ಅದು ನಾಗರಿಕತೆಯಷ್ಟೇ ಹಳೆಯದು. ಇತ್ತೀಚಿನ ದಿನಗಳಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಕಥೆಗಳು ಜನಪ್ರಿಯತೆ ಗಳಿಸುತ್ತಿವೆ. ಅನೇಕರು ಕಥೆ ಹೇಳುವಿಕೆಯನ್ನು ದೇಶದಾದ್ಯಂತ ಜನಪ್ರಿಯಗೊಳಿಸುತ್ತಿದ್ದಾರೆ ಮತ್ತು ಭಾರತವು ಕಥೆ ಹೇಳುವ ಅದ್ಭುತ ಸಂಪ್ರದಾಯವನ್ನು ಹೊಂದಿದೆ,’ ಎಂದು ಹೇಳಿದರು.
ಇದೇ ವೇಳೆ ಅವರು ಬೆಂಗಳೂರಿನ ಕತೆ ನಿರೂಪಣಾ ವೆಬ್ಸೈಟ್ Gaathastory.in ಅನ್ನು ಉಲ್ಲೇಖಿಸಿದರು. ಅದರ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ‘ಎಲ್ಲಾ ಕುಟುಂಬಗಳು, ತಮ್ಮ ನಡುವೆ ಕತೆ ಹೇಳಲು ಸ್ವಲ್ಪ ಸಮಯವನ್ನು ಮೀಸಲಿಡುವಂತೆ ವಿನಂತಿಸಿದ ಮೋದಿ, ಅದು ಅದ್ಭುತ ಅನುಭವ ನೀಡಲಿದೆ,’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.