ಅಯೋಧ್ಯೆ: ರಾಮ ಮಂದಿರದ ಗರ್ಭಗುಡಿಯಲ್ಲಿ ನೆಲೆಸಿರುವ ಬಾಲರಾಮನ ಮೂರ್ತಿಯನ್ನು ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ಸಂತಸಕ್ಕೆ ಎಲ್ಲೆಯೇ ಇಲ್ಲವಾಗಿದೆ. ಮೂರ್ತಿ ಕೆತ್ತನೆಯ ಕಾರ್ಯಕ್ಕೆ ಶ್ರೀರಾಮನೇ ತಮ್ಮನ್ನು ಆಯ್ಕೆ ಮಾಡಿದ್ದಾನೆ ಎಂದು ಅವರು ನಂಬಿದ್ದಾರೆ. ಅಲ್ಲದೆ, ಜಗತ್ತಿನ ಅತ್ಯಂತ ಅದೃಷ್ಟವಂತ ವ್ಯಕ್ತಿ ತಾವು ಎಂದು ಕೂಡ ಅವರು ಖುಷಿಯಿಂದ ಹೇಳಿದ್ದಾರೆ.
‘ನನ್ನನ್ನು ಮತ್ತು ನನ್ನ ಕುಟುಂಬವನ್ನು ಶ್ರೀರಾಮನೇ ಎಲ್ಲ ಕೆಡುಕುಗಳಿಂದ ರಕ್ಷಿಸುತ್ತಿದ್ದಾನೆ ಎಂಬುದು ನನ್ನ ನಂಬಿಕೆ’ ಎಂದು ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅವರು ಹೇಳಿದ್ದಾರೆ. ಅರುಣ್ ಅವರು ಕೆತ್ತಿರುವ ಮೂರ್ತಿಯ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
‘ಮೂರ್ತಿ ಕೆತ್ತನೆಯ ಸಂದರ್ಭದಲ್ಲಿ ನಾನು ನಿದ್ದೆಗೆಟ್ಟು ಕೆಲಸ ಮಾಡಿದ್ದೇನೆ. ಅಷ್ಟು ಶ್ರಮ ಹಾಕಿದ್ದಕ್ಕೆ ಫಲ ಸಿಕ್ಕಿದೆ... ಇದು ನನ್ನ ಜೀವನದ ಅತ್ಯಂತ ಶ್ರೇಷ್ಠ ದಿನ’ ಎಂದು ಅವರು ಹೇಳಿದ್ದಾರೆ. ‘ನಾನು ಮೂರ್ತಿ ಕೆತ್ತುವ ಕೆಲಸ ಕಲಿತಿದ್ದು ನನ್ನ ತಂದೆಯಿಂದ. ಅವರು ಇದ್ದಿದ್ದರೆ ನನ್ನನ್ನು ಇಲ್ಲಿ ಕಂಡು ಬಹಳ ಹೆಮ್ಮೆಪಡುತ್ತಿದ್ದರು’ ಎಂದು ಹೇಳಿದ್ದಾರೆ.
ಅರುಣ್ ಅವರು ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಇದ್ದರು. ಅವರ ಕುಟುಂಬದ ಸದಸ್ಯರು ಮೈಸೂರಿನಿಂದಲೇ ಕಾರ್ಯಕ್ರಮ ವೀಕ್ಷಿಸಿದರು.