ನವದೆಹಲಿ (ಪಿಟಿಐ): ಸೆಪ್ಟೆಂಬರ್ 9 ಮತ್ತು 10ರಂದು ಜಿ 20 ಶೃಂಗಸಭೆ ಹಿನ್ನೆಲೆಯಲ್ಲಿ ದೆಹಲಿಯ 61 ರಸ್ತೆಗಳು ಮತ್ತು ಸ್ಥಳಗಳನ್ನು 6.75 ಲಕ್ಷ ಹೂ, ಎಲೆಗಳ ಸಸ್ಯಗಳ ಕುಂಡಗಳಿಂದ ಅಲಂಕರಿಸಲಾಗುತ್ತದೆ ಎಂದು ರಾಜ್ ನಿವಾಸ್ (ರಾಜಭವನದ) ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಸರ್ದಾರ್ ಪಟೇಲ್ ಮಾರ್ಗ, ಮದರ್ ತೆರೇಸಾ ಕ್ರೆಸೆಂಟ್, ತೀನ್ ಮೂರ್ತಿ ಮಾರ್ಗ, ಧೌಲಾ ಕುವಾನ್-ಐಜಿಐ ವಿಮಾನ ನಿಲ್ದಾಣ ರಸ್ತೆ, ಪಾಲಂ ಟೆಕ್ನಿಕಲ್ ಏರಿಯಾ, ಇಂಡಿಯಾ ಗೇಟ್ ಸಿ-ಹೆಕ್ಸಗಾನ್, ಮಂಡಿ ಹೌಸ್, ಅಕ್ಬರ್ ರಸ್ತೆ ವೃತ್ತ, ದೆಹಲಿ ಗೇಟ್, ರಾಜ್ಘಾಟ್ ಮತ್ತು ಇತರ ರಸ್ತೆ, ಪ್ರದೇಶಗಳನ್ನು ಗಿಡಗಳಿಂದ ಅಲಂಕರಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಲಂಕಾರದ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸಬಲ್ಲ ಇಲಾಖೆಗಳನ್ನು ಗುರುತಿಸುವಂತೆ ಲೆಫ್ಟಿನೆಂಟ್ ಗವರ್ನರ್ ವಿ. ಕೆ. ಸಕ್ಸೇನಾ ನೇತೃತ್ವದ ಪೂರ್ವಸಿದ್ಧತಾ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಲಾಯಿತು.
ಅರಣ್ಯ ಇಲಾಖೆ ಮತ್ತು ದೆಹಲಿ ಉದ್ಯಾನ ಇಲಾಖೆಯು 3.75 ಲಕ್ಷ ಗಿಡಗಳನ್ನು, ಲೋಕೋಪಯೋಗಿ ಇಲಾಖೆಯು 50,000 ಗಿಡಗಳನ್ನು ಇರಿಸಲಿದೆ, ದೆಹಲಿ ಅಭಿವೃದ್ಧಿ ಪ್ರಾಧಿಕಾರ 1 ಲಕ್ಷ, ನವದೆಹಲಿ ಮುನ್ಸಿಪಲ್ ಕೌನ್ಸಿಲ್ 1 ಲಕ್ಷ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ 50,000 ಕುಂಡಗಳನ್ನು ಹೊಂದಿಸಲಿದೆ.
ಈಗಾಗಲೇ 61 ರಸ್ತೆಗಳಲ್ಲಿ 4.05 ಲಕ್ಷ ಕುಂಡಗಳನ್ನು ಇರಿಸಲಾಗಿದೆ. ಹೂವಿನ ಗಿಡಗಳನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಇರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.