ಪಣಜಿ, ಗೋವಾ: ಸರ್ದಾರ್ ವಲ್ಲಭಭಾಯಿ ಪಟೇಲರು ಇನ್ನೂ ಸ್ವಲ್ಪ ಕಾಲ ಬದುಕಿದ್ದರೆ ಗೋವಾ ಇನ್ನೂ ಬೇಗನೇ ಪೋರ್ಚುಗೀಸರ ಆಡಳಿತದಿಂದ ಮುಕ್ತಿ ಹೊಂದಿ ಸ್ವತಂತ್ರವಾಗುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಗೋವಾ ವಿಮೋಚನಾ ದಿನದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತ ಸ್ವಾತಂತ್ರ್ಯ ಪಡೆದ ನಂತರವೂ ಗೋವಾ ಸ್ವತಂತ್ರವಾಗಿರಲಿಲ್ಲ. ಪಟೇಲರು ಅದಕ್ಕಾಗಿ ಹೋರಾಡುತ್ತಿದ್ದರು’ ಎಂದು ಮೋದಿ ಹೇಳಿದರು.
ಗೋವಾ ವಿಮೋಚನೆಗಾಗಿ ಹೋರಾಡಿದ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಗೋವಾ ವಿಮೋಚನೆಗಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿದರು.
ಉತ್ತಮ ಆಡಳಿತದ ಹಲವು ಮಾನದಂಡಗಳಲ್ಲಿ ರಾಜ್ಯವು ಉತ್ತಮ ಸಾಧನೆ ಮಾಡಿರುವುದಕ್ಕೆ ಪ್ರಧಾನಿ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಭಾರತೀಯ ಸಶಸ್ತ್ರ ಪಡೆಯು 1961ರ ಡಿಸೆಂಬರ್ 19 ರಂದು ಗೋವಾವನ್ನು ಪೋರ್ಚುಗೀಸರ ದಾಸ್ಯದಿಂದ ವಿಮುಕ್ತಿಗೊಳಿಸಿತು. ಆದ್ದರಿಂದ ಈ ದಿನವನ್ನು ಗೋವಾ ವಿಮೋಚನಾ ದಿನವಾಗಿ ಆಚರಿಸಲಾಗುತ್ತದೆ.