ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ರಚಿಸಿದವರಿಗೆ ರಾಮ ಸ್ಫೂರ್ತಿಯ ಸೆಲೆ: ಪ್ರಧಾನಿ ಮೋದಿ

Published 28 ಜನವರಿ 2024, 13:51 IST
Last Updated 28 ಜನವರಿ 2024, 13:51 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆ ಕಾರ್ಯಕ್ರಮವು ಕೋಟ್ಯಂತರ ಜನರನ್ನು ಒಟ್ಟಿಗೆ ಸೇರಿಸಿತು. ಅಲ್ಲದೆ, ಈ ವೇಳೆ ದೇಶದ ಒಟ್ಟಾರೆ ಸಾಮರ್ಥ್ಯ ಗೋಚರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಿ ಹೇಳಿದ್ದಾರೆ. 

ವರ್ಷದ ಮೊದಲ ಮಾಸಿಕ ರೇಡಿಯೊ ‘ಮನ್‌ ಕೀ ಬಾತ್’ ಕಾರ್ಯಕ್ರಮ ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ‘ಸಂವಿಧಾನ ರಚಿಸಿದವರಿಗೆ ಶ್ರೀರಾಮನೇ ಸ್ಫೂರ್ತಿಯ ಸೆಲೆ’ ಎಂದು ಪ್ರತಿಪಾದಿಸಿದರು. 

‘ಇದೇ ಕಾರಣಕ್ಕಾಗಿ ಜನವರಿ 22ರಂದು ಅಯೋಧ್ಯೆಯಲ್ಲಿ ನಾನು ‘ದೇವನಿಂದ ದೇಶ’ ಮತ್ತು ‘ರಾಮನಿಂದ ರಾಷ್ಟ್ರ’ ಎಂದು ಮಾತನಾಡಿದ್ದೇನೆ. ಪ್ರತಿಯೊಬ್ಬರ ಭಾವನೆ ಮತ್ತು ಭಕ್ತಿ ಒಂದೇ ಆಗಿತ್ತು. ಪ್ರತಿಯೊಬ್ಬರ ಮನದಲ್ಲಿ ರಾಮನಿದ್ದಾನೆ’ ಎಂದು ಹೇಳಿದರು. 

‘ಜನವರಿ 22ರ ಸಂಜೆ ಇಡೀ ದೇಶವೇ ರಾಮ ಜ್ಯೋತಿಯನ್ನು ಬೆಳಗಿ, ದೀಪಾವಳಿಯನ್ನು ಆಚರಿಸಿತು. ಪ್ರತಿಯೊಬ್ಬರೂ ರಾಮನ ಭಜನೆ ಮಾಡಿ, ತಮ್ಮನ್ನು ರಾಮನಿಗೆ ಅರ್ಪಿಸಿಕೊಂಡರು. ಒಗ್ಗಟ್ಟಿನ ಶಕ್ತಿಯು ದೇಶವನ್ನು ಪ್ರಗತಿಯ ಹೊಸ ಉತ್ತುಂಗಕ್ಕೆ ಕೊಂಡೊಯ್ಯಲಿದೆ’ ಎಂದರು. 

‘ಸಮಾಜದ ಬಹುದೊಡ್ಡ ಬದಲಾವಣೆಗಾಗಿ ಎಲೆಮರೆ ಕಾಯಿಯಂತೆ ತಳಮಟ್ಟದಲ್ಲಿ ದುಡಿದವರು ಇತ್ತೀಚೆಗೆ ಪದ್ಮ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಕಳೆದೊಂದು ದಶಕದಲ್ಲಿ ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡುವ ವ್ಯವಸ್ಥೆಯು ಸಂಪೂರ್ಣವಾಗಿ ಬದಲಾಗಿದ್ದು, ನನಗೆ ತುಂಬಾ ಖುಷಿ ಕೊಟ್ಟಿದೆ. ಇದೀಗ ಈ ಪುರಸ್ಕಾರವು ಜನರ ಪದ್ಮ ಪ್ರಶಸ್ತಿಯಾಗಿದೆ’ ಎಂದು ಹೆಮ್ಮೆ ವ್ಯಕ್ತಪಡಿಸಿದರು. 

ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪಾಲ್ಗೊಂಡಿದ್ದ ಸಶಸ್ತ್ರಪಡೆಗಳ 20 ತುಕಡಿಗಳ ಪೈಕಿ 11 ತುಕಡಿಗಳಲ್ಲಿ ಮಹಿಳೆಯರೇ ಇದ್ದರು. ಸ್ತಬ್ಧಚಿತ್ರಗಳ ಕಲಾವಿದರೂ ಮಹಿಳೆಯರೇ ಆಗಿದ್ದರು. ಅಂದಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 1500 ಹೆಣ್ಣುಮಕ್ಕಳು ಭಾಗವಹಿಸಿದ್ದರು ಎಂದು ನಾರಿಶಕ್ತಿ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT