ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿಡಿಯೊವನ್ನು ಹಂಚಿಕೊಂಡಿರುವ ಗೆಹಲೋತ್, ‘ಸಮಾಜದಲ್ಲಿನ ಪ್ರತಿಯೊಂದು ಹಿಂದುಳಿದ ವರ್ಗವು ಸಾಮಾಜಿಕ ನ್ಯಾಯದ ಮೂಲಕ ತಮ್ಮ ಹಕ್ಕುಗಳನ್ನು ಪಡೆಯುವುದು ಅಗತ್ಯವಾಗಿದೆ. ದೇಶದಲ್ಲಿ ಜನಗಣತಿ ನಡೆಸಲು 2021ರ ಗಡುವು ಮುಗಿದು ಮೂರು ವರ್ಷಗಳು ಕಳೆದರೂ ಮೋದಿ ಸರ್ಕಾರಕ್ಕೆ ಜನಗಣತಿ ನಡೆಸಲು ಸಾಧ್ಯವಾಗಿಲ್ಲ. ಇದರ ಹಿಂದಿನ ಕಾರಣವನ್ನು ಕೇಂದ್ರ ಸರ್ಕಾರ ಹೇಳಬೇಕು’ ಎಂದು ಅವರು ಪ್ರಶ್ನಿಸಿದ್ದಾರೆ.
ವಿಡಿಯೊದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ದೇಶದಲ್ಲಿ ಶೇ. 50 ರಷ್ಟು ಮೀಸಲಾತಿಯ ಮಿತಿ ಇದೆ. ಇದನ್ನು ಬೇರು ಸಮೇತ ಕಿತ್ತು ಹಾಕುವುದು ಕಾಂಗ್ರೆಸ್ ಹಾಗೂ ‘ಇಂಡಿಯಾ’ ಮೈತ್ರಿಕೂಟದ ಗ್ಯಾರಂಟಿಯಾಗಿದೆ ಎಂದು ಹೇಳಿದ್ದಾರೆ.
ಪ್ರತಿಯೊಂದು ವರ್ಗಕ್ಕೂ ನ್ಯಾಯವನ್ನು ಒದಗಿಸಲು ಸಾಮಾಜಿಕ, ಆರ್ಥಿಕ ಮತ್ತು ಜಾತಿ ಸಮೀಕ್ಷೆಯನ್ನು ನಡೆಸಲು ಹಿಂದಿನ ಕಾಂಗ್ರೆಸ್ ಸರ್ಕಾರ ನಿರ್ಧರಿಸಿತ್ತು. ಅಲ್ಲದೆ, ದೇಶದಾದ್ಯಂತ ಜಾತಿ ಗಣತಿಯನ್ನು ನಡೆಸುವುದು ರಾಹುಲ್ ಗಾಂಧಿ ಮತ್ತು ‘ಇಂಡಿಯಾ’ ಮೈತ್ರಿಕೂಟದ ಬದ್ಧತೆಯಾಗಿದೆ ಎಂದು ಗೆಹಲೋತ್ ತಿಳಿಸಿದ್ದಾರೆ.