ಲಖನೌ: ಜ್ಞಾನವಾಪಿ ಮಸೀದಿ ಆವರಣದ ವಿಸ್ತೃತ ವೈಜ್ಞಾನಿಕ ಸಮೀಕ್ಷೆಗೆ ತಡೆಯಾಜ್ಞೆ ಕೋರಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಆಗಸ್ಟ್ 3ರಂದು ನೀಡಲಿದೆ. ಅಲ್ಲಿಯವರೆಗೂ ಈ ಕುರಿತ ತಡೆಯಾಜ್ಞೆ ಮುಂದುವರಿಯಲಿದೆ.
ಗುರುವಾರ ಎರಡೂ ಕಡೆಯ ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ಪ್ರೀತಿಂಕೆರ್ ದಿವಾಕರ್ ಅವರಿದ್ದ ಏಕಸದಸ್ಯ ಪೀಠ ತೀರ್ಪು ಕಾಯ್ದಿರಿಸಿತು. ಮಸೀದಿಯ ನಿರ್ವಹಣೆ ಉಸ್ತುವಾರಿ ಹೊಂದಿರುವ ಅಂಜುಮನ್ ಇಂತೆಜಾಮಿಯಾ ಸಮಿತಿ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿತ್ತು.
ಇದಕ್ಕೂ ಮುನ್ನ ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು, ‘ಈ ಮೊದಲು ಕಮಿಷನರ್ ಅವರು ಸಮೀಕ್ಷೆ ನಡೆಸಿದ್ದ ವೇಳೆ ಅಲ್ಲಿ ‘ಸ್ವಸ್ತಿಕ್ ಚಿಹ್ನೆ’ ಕಂಡುಬಂದಿದೆ. ಇದು, ದೇವಸ್ಥಾನ ಸ್ಥಳದಲ್ಲಿ ಮಸೀದಿ ನಿರ್ಮಿಸಿರುವುದರ ದ್ಯೋತಕವಾಗಿದೆ’ ಎಂದು ವಾದಿಸಿದರು.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ನಡೆಸಲಿರುವ ಸಮೀಕ್ಷೆಯನ್ನು ಇನ್ನಷ್ಟು ನಿರ್ಣಾಯಕವಾದ ಪುರಾವೆಗಳನ್ನು ಬಹಿರಂಗ ಪಡಿಸಬಹುದಾಗಿದೆ ಎಂದು ಪ್ರತಿಪಾದಿಸಿದರು.
17ನೇ ಶತಮಾನದಲ್ಲಿ ಮೊಘಲ್ ದೊರೆ ಔರಂಗಜೇಬ್, ದೇಗುಲವನ್ನು ಭಾಗಶಃ ನೆಲಸಮಗೊಳಿಸಿದ್ದಾರೆ ಎಂಬುದು ಹಿಂದೂ ಅರ್ಜಿದಾರರ ವಾದ. ಮುಸ್ಲಿಂ ಅರ್ಜಿದಾರರು, ‘ಔರಂಗಜೇಬ್ ಆಳ್ವಿಕೆಗೆ ಮೊದಲೇ ಮಸೀದಿ ಇತ್ತು. ಪೂರಕವಾಗಿ ಭೂದಾಖಲೆಗಳಿವೆ‘ ಎಂದು ವಾದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.