ತಿರುವನಂತಪುರ: ಕೇರಳದ ಹಲವು ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಸತತ ಭಾರಿ ಮಳೆಯಾಗುತ್ತಿದ್ದು, ರಾಜ್ಯದ ಅನೇಕ ಭಾಗಗಳಲ್ಲಿ ಭಾನುವಾರ ಭೂಕುಸಿತ ಮತ್ತು ಪ್ರವಾಹ ಉಂಟಾಗಿದೆ.
ರಾಜ್ಯದ ದಕ್ಷಿಣ ಭಾಗದ ತಿರುವನಂತಪುರದಲ್ಲಿ ಹಲವು ಪ್ರದೇಶಗಳು ಜಲಾವೃತವಾಗಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಎರ್ನಾಕುಳಂ ಜಿಲ್ಲೆಯ ಹಲವು ಭಾಗಗಳಲ್ಲಿ ರಸ್ತೆಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿದೆ.
ಶನಿವಾರ ಸಂಜೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ರಾಜಧಾನಿ ತಿರುವನಂತಪುರ ನಗರದ ವಿವಿಧೆಡೆ ಹಾಗೂ ಉಪನಗರಗಳಲ್ಲಿ ನೂರಾರು ಮನೆಗಳು ಜಲಾವೃತವಾಗಿವೆ. ನೂರಾರು ಮನೆಗಳಿಗೆ ಹಾನಿಯಾಗಿದೆ. ಸುಮಾರು 500 ಕುಟುಂಬಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ನಗರದ ಪ್ರಮುಖ ಖಾಸಗಿ ಆಸ್ಪತ್ರೆಯೊಂದರ ನೆಲ ಮಹಡಿ ಕೂಡ ಜಲಾವೃತವಾಗಿದೆ. ಕಳಕೂಟಂ ಕಾಲೊನಿಯ ಟೆಕ್ನೋಪಾರ್ಕ್ ಪಾರ್ಕ್ ಪ್ರದೇಶವೂ ಜಲಾವೃತವಾಗಿದೆ. ಭಾನುವಾರ ಬೆಳ್ಳಂಬೆಳಿಗ್ಗೆಯೇ ಮಳೆ ನೀರು ಹಲವು ಮನೆಗಳಿಗೆ ನುಗ್ಗಿದಾಗ ನಿಗರ ನಿವಾಸಿಗಳು ಬೆಚ್ಚಿಬಿದ್ದರು. ರಾಜಕಾಲುವೆಗಳ ಅಸಮರ್ಪಕ ನಿರ್ವಹಣೆಯೇ ನೀರು ನುಗ್ಗಲು ಕಾರಣವೆಂದು ನಿವಾಸಿಗಳು ಸ್ಥಳೀಯಾಡಳಿತವನ್ನು ದೂರಿದ್ದಾರೆ.
‘2018ರ ಪ್ರವಾಹದ ವೇಳೆಯೂ ಇಂತಹ ಪರಿಸ್ಥಿತಿ ಉಂಟಾಗಿರಲಿಲ್ಲ. ಮಧ್ಯರಾತ್ರಿಯ ನಂತರ ಹಠಾತ್ತನೆ ಮನೆಗಳಿಗೆ ನೀರು ನುಗ್ಗಲಾರಂಭಿಸಿತು. ಇದು ಅನಿರೀಕ್ಷಿತವಾಗಿತ್ತು’ ಎಂದು ರಾಜಧಾನಿಯ ನಿವಾಸಿಗಳು ಹೇಳಿದ್ದಾರೆ.
ರಕ್ಷಣಾ ಸಿಬ್ಬಂದಿ, ತಿರುವನಂತಪುರದಲ್ಲಿ ಜಲಾವೃತ ಪ್ರದೇಶಗಳಿಂದ ಜನರನ್ನು ಗಾಳಿ ತುಂಬಿದ ದೋಣಿಗಳಲ್ಲಿ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸುತ್ತಿರುವ ಮತ್ತು ನೀರಿನಲ್ಲಿ ಕಾರುಗಳು ಭಾಗಶಃ ಮುಳುಗಿರುವ ದೃಶ್ಯಗಳನ್ನು ಟಿ.ವಿ ವಾಹಿನಿಯೊಂದು ಪ್ರಸಾರ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.