ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತೆಲಂಗಾಣಕ್ಕೆ ಮಾತ್ರ ಹೈದರಾಬಾದ್‌ ರಾಜಧಾನಿ

10 ವರ್ಷ ಉಭಯ ರಾಜ್ಯಗಳ ರಾಜಧಾನಿಯಾಗಿದ್ದ ಮುತ್ತಿನ ನಗರಿ; ಜೂನ್ 2ರಿಂದ ಜಾರಿ
Published 17 ಮೇ 2024, 19:11 IST
Last Updated 17 ಮೇ 2024, 19:11 IST
ಅಕ್ಷರ ಗಾತ್ರ

ಹೈದರಾಬಾದ್‌: ಮುತ್ತಿನ ನಗರಿ ಹೈದರಾಬಾದ್‌ ಜೂನ್‌ 2ರ ನಂತರ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಜಂಟಿ ರಾಜಧಾನಿಯಾಗಿ ಮುಂದುವರಿ ಯುವುದಿಲ್ಲ. ಆನಂತರ, ಅದು ತೆಲಂಗಾಣದ ರಾಜಧಾನಿಯಾಗಿ ಮಾತ್ರ ಇರಲಿದೆ.

‘ಹೈದರಾಬಾದ್‌ ನಗರವು, 10 ವರ್ಷ ಮೀರದಂತೆ ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳ ರಾಜಧಾನಿಯಾಗಿರಲಿದೆ. ಈ ವ್ಯವಸ್ಥೆ, ರಾಜ್ಯ ವಿಭಜನೆಯಾದ 2014ರ ಜೂನ್‌ 2ರಿಂದ ಜಾರಿಗೆ ಬರಲಿದೆ’ ಎಂದು ಆಂಧ್ರಪ್ರದೇಶ ಪುನರ್‌ ರಚನೆ ಕಾಯ್ದೆ, 2014 ಸೆಕ್ಷನ್‌ 5ರಲ್ಲಿ ಹೇಳಲಾಗಿದೆ. 

‘10 ವರ್ಷದ ನಂತರ, ಹೈದರಾಬಾದ್‌ ನಗರವು ತೆಲಂಗಾಣದ ರಾಜಧಾನಿಯಾಗಿರಲಿದೆ’ ಎಂದು ಇದೇ ಸೆಕ್ಷನ್ 5ರಲ್ಲಿ ಉಲ್ಲೇಖಿಸಲಾಗಿದೆ. 

ಹೈದರಾಬಾದ್‌ನಲ್ಲಿರುವ ಲೇಕ್ ವ್ಯೂ ಗೆಸ್ಟ್‌ ಹೌಸ್‌ ಸೇರಿದಂತೆ ಪ್ರಮುಖ ಕಟ್ಟಡಗಳನ್ನು
ಸುಪರ್ದಿಗೆ ಪಡೆಯುವಂತೆ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಈಚೆಗೆ ನಿರ್ದೇಶನ ನೀಡಿದ್ದರು. ನಗರದ ಪ್ರಮುಖ ಕಟ್ಟಡಗಳನ್ನು ಆಗ ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದ ಆಂಧ್ರಪ್ರದೇಶ ರಾಜ್ಯದ ಕಚೇರಿಗಳಿಗಾಗಿ 10 ವರ್ಷದ ಅವಧಿಗೆ ಹಂಚಿಕೆ ಮಾಡಲಾಗಿತ್ತು.

ಉಭಯ ರಾಜ್ಯಗಳ ನಡುವೆ ಬಗೆಹರಿಯದಿ ರುವ ವಿಷಯ ಕುರಿತು ವರದಿ ಸಲ್ಲಿಸುವಂತೆಯೂ ಮುಖ್ಯಮಂತ್ರಿ ರೇವಂತ ರೆಡ್ಡಿ ಸೂಚನೆ ನೀಡಿದ್ದರು.

‘ಜೂನ್ 2ರ ಒಳಗಾಗಿ, ಉಭಯ ರಾಜ್ಯಗಳ ನಡುವಿನ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಕಟ್ಟಡಗಳನ್ನು ಸುಪರ್ದಿಗೆ ತೆಗೆದುಕೊಳ್ಳಲು ತೆಲಂಗಾಣ ಮುಖಮಂತ್ರಿ ಯಾಕಿಷ್ಟು ಉತ್ಸಾಹ ತೋರುತ್ತಿದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ’ ಎಂದು ಹಿರಿಯ ಪತ್ರಕರ್ತ ತೇಲಕಪಲ್ಲಿ ರವಿ ‘ಪ್ರಜಾವಾಣಿ’ಗೆ ಹೇಳಿದ್ದಾರೆ.

‘ವಿಧಾನಸಭೆ ಚುನಾವಣೆ ಫಲಿತಾಂಶ ಜೂನ್‌ 4ರಂದು ಪ್ರಕಟವಾಗಲಿದೆ. ಆಂಧ್ರದಲ್ಲಿ ಪೂರ್ಣ ಪ್ರಮಾಣದ ಸರ್ಕಾರ ರಚನೆ ಆಗಿರುವುದಿಲ್ಲ. ಸುಸಜ್ಜಿತ ಕಟ್ಟಡಗಳನ್ನು ಹೊಂದಿ, ಆಡಳಿತ ನಡೆಸಲು ನೂತನ ಸರ್ಕಾರಕ್ಕೆ ಸಮಯ ಬೇಕಾಗು ತ್ತದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ತೆಲಂಗಾಣ ಸಚಿವ ಸಂಪುಟ ಸಭೆ ಇಂದು 

ಹೈದರಾಬಾದ್‌ ನಗರವು ಜೂನ್‌ 2ರಿಂದ ಅನ್ವಯವಾಗುವಂತೆ ತೆಲಂಗಾಣದ ರಾಜಧಾನಿಯಾಗಿ ಮುಂದುವರಿಯುವುದಕ್ಕೆ ಸಂಬಂಧಿಸಿದ ವಿಚಾರಗಳನ್ನು ಕುರಿತು ಚರ್ಚಿಸಲು ಮುಖ್ಯಮಂತ್ರಿ ಎ.ರೇವಂತ ರೆಡ್ಡಿ ಅವರು ಶನಿವಾರ ಸಂಪುಟ ಸಭೆ ಕರೆದಿದ್ದಾರೆ. ಇದೇ ವಿಚಾರವಾಗಿ ಅವರು ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯನ್ನು ಇತ್ತೀಚೆಗೆ ನಡೆಸಿದ್ದರು. ಆಸ್ತಿಗಳನ್ನು ಭಾಗ ಮಾಡುವುದು ವಿಭಜನೆ ನಂತರ ಉಭಯ ರಾಜ್ಯಗಳಿಗೆ ಸಂಬಂಧಿಸಿ ಬಾಕಿ ಇರುವ ಸಾಲ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಿದ್ದರು. ಉಭಯ ರಾಜ್ಯಗಳ ನಡುವಿನ ಬಾಕಿ ವಿಷಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕು ಹಾಗೂ ತೆಲಂಗಾಣದ ಹಿತಾಸಕ್ತಿ ಕಾಪಾಡುವುದಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT