ಬೆಂಗಳೂರು: ‘ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಹೈಕಮಾಂಡ್ ಒಪ್ಪುವುದಿಲ್ಲ’ ಎಂದು ತಾವು ಹೇಳಿರುವುದಾಗಿ ಖಾಸಗಿ ಸುದ್ದಿ ಮಾಧ್ಯಮವೊಂದು ಪ್ರಕಟಿಸಿರುವ ವರದಿಯ ವಿರುದ್ಧ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಡಿ.ಕೆ ಶಿವಕುಮಾರ್ ಅವರನ್ನು ಹೈಕಮಾಂಡ್ ಮುಖ್ಯಮಂತ್ರಿ ಮಾಡುವುದಿಲ್ಲ’ ಎಂದು ಸಿದ್ದರಾಮಮ್ಯ ಹೇಳಿರುವುದಾಗಿ ಖಾಸಗಿ ಸುದ್ದಿ ವಾಹಿನಿ ಎನ್ಡಿಟಿವಿ ಸೋಮವಾರ ವರದಿ ಪ್ರಕಟಿಸಿತ್ತು.
News article published by @ndtv (Adani TV), alleging that I had commented about Chief Minister candidate in Karnataka, is far from truth.
— Siddaramaiah (@siddaramaiah) April 4, 2023
I never made such comments and will never do such petty politics.
I urge @ndtv to issue clarification and pull down the baseless post. https://t.co/bgIV3QAxtl
ಈ ಬಗ್ಗೆ ಮಂಗಳವಾರ ಬೆಳಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿಯ ಬಗೆಗಿನ ನನ್ನ ಅಭಿಪ್ರಾಯ ಎಂದು ಆರೋಪಿಸಿ ಎನ್ಡಿಟಿವಿ (ಅದಾನಿ ಟಿವಿ) ಪ್ರಕಟಿಸಿದ ಸುದ್ದಿ ಲೇಖನ ಸತ್ಯಕ್ಕೆ ದೂರವಾಗಿದೆ. ನಾನು ಯಾವತ್ತೂ ಅಂತಹ ಹೇಳಿಕೆಯನ್ನು ನೀಡಿಲ್ಲ. ಅಂತಹ ಕ್ಷುಲ್ಲಕ ರಾಜಕೀಯವನ್ನು ಎಂದಿಗೂ ಮಾಡುವುದಿಲ್ಲ. ಎನ್ಡಿಟಿವಿ ಸ್ಪಷ್ಟೀಕರಣವನ್ನು ನೀಡುವಂತೆ ಮತ್ತು ಆಧಾರರಹಿತ ಪೋಸ್ಟ್ ಅನ್ನು ತೆಗೆದುಹಾಕುವಂತೆ ಒತ್ತಾಯಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಸಂದರ್ಶವನ್ನು ಸುದ್ದಿ ವಾಹಿನಿ ಎನ್ಡಿಟಿವಿ ಸೋಮವಾರ ಪ್ರಕಟಿಸಿತ್ತು.
ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ಕೇಳಲಾದ ಸಂದರ್ಶಕರ ಪ್ರಶ್ನೆಗೆ ಉತ್ತರಿಸುವ ಸಿದ್ದರಾಮಯ್ಯ, ‘ಮುಖ್ಯಮಂತ್ರಿ ಸ್ಥಾನಕ್ಕೆ ನಾನೂ ಆಕಾಂಕ್ಷಿ. ಡಿ.ಕೆ ಶಿವಕುಮಾರ್ ಅವರೂ ಅಕಾಂಕ್ಷಿ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದು ಸಾಮಾನ್ಯ. ಅದರಲ್ಲಿ ಯಾವ ತಪ್ಪೂ ಇಲ್ಲ. ಶಿವಕುಮಾರ್ ಮುಖ್ಯಮಂತ್ರಿಯಾಗಲು ಬಯಸಿದರೆ ಅದರಲ್ಲಿ ತಪ್ಪಿಲ್ಲ. ನಾನು ಬಯಸಿದರೆ, ಇತರರು ಬಯಸಿದರೆ ಅದರಲ್ಲೂ ತಪ್ಪಿಲ್ಲ. ಆದರೆ, ಚುನಾಯಿತ ಶಾಸಕರು ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಬೇಕು. ಅಂತಿಮವಾಗಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅದು ಪ್ರಜಾಪ್ರಭುತ್ವ ಪ್ರಕ್ರಿಯೆ’ ಎಂದು ಹೇಳುತ್ತಾರೆ.
‘ಒಂದುವೇಳೆ ಪಕ್ಷವೇನಾದರೂ ಡಿ.ಕೆ ಶಿವಕುಮಾರ್ ಅವರಿಗೆ ಅವಕಾಶ ಮಾಡಿಕೊಡುವಂತೆ ಕೇಳಿದರೆ ನೀವು ಬಿಟ್ಟುಕೊಡುವಿರಾ’ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸಿದ್ದರಾಮಯ್ಯ, ‘ಇಲ್ಲ... ಹಾಗೆಲ್ಲ ಆಗುವುದಿಲ್ಲ. ಯಾಕೆಂದರೆ, ನಾವು ಪ್ರಜಾಸತ್ತಾತ್ಮಕ ಮಾದರಿಯಲ್ಲಿ ನಡೆದುಕೊಳ್ಳಬೇಕಾಗುತ್ತದೆ. ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹೈಕಮಾಂಡ್ ಹಾಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಚುನಾಯಿತ ಶಾಸಕರ ಅಭಿಪ್ರಾಯದಂತೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಅವರ ಸಂದರ್ಶನದ ಆಧಾರದಲ್ಲೇ "High Command Won't...": Siddaramaiah Says DK Shivakumar Won't Be Chief Minister (ಡಿ.ಕೆ ಶಿವಕುಮಾರ್ ಅವರನ್ನು ಹೈಕಮಾಂಡ್ ಮುಖ್ಯಮಂತ್ರಿ ಮಾಡುವುದಿಲ್ಲ) ಎಂಬ ಶೀರ್ಷಿಕೆಯಡಿ ತನ್ನ ವೆಬ್ಸೈಟ್ನಲ್ಲಿ ವರದಿ ಪ್ರಕಟಿಸಿದೆ.
ಈ ವರದಿಯ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ‘ಕಾಂಗ್ರೆಸ್ ನಾಯಕರ ನಡುವೆ ಬಿರುಕುಗಳನ್ನು ಸೃಷ್ಟಿಸಲು ಬಿಜೆಪಿಯು ಅದಾನಿಯವರ ಎನ್ಡಿಟಿವಿಯನ್ನು ಬಳಸುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸುದ್ದಿಯ ಬಗ್ಗೆ ಎನ್ಡಿಟಿವಿಯಿಂದ ಸ್ಪಷ್ಟನೆ ಬಯಸಿದ್ದಾರೆ. ಜತೆಗೆ, ಸುದ್ದಿಯನ್ನು ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ.
ಬಿರುಕು ಮೂಡಿಸಲು ಯತ್ನ: ಕಾಂಗ್ರೆಸ್
ಬಿಜೆಪಿಗೆ ಸೋಲು ನಿಶ್ಚಿತವಾಗಿ ಕಾಣುತ್ತಿದೆ. ಹಾಗಾಗಿ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಹರಡಿ ಕಾಂಗ್ರೆಸ್ ನಾಯಕರ ನಡುವೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದೆ. ಸಿದ್ದರಾಮಯ್ಯ ಅವರ ಹೇಳಿಕೆಗೂ, ಮಾಧ್ಯಮದ ವರದಿಗೂ ಯಾವುದೇ ಸಂಬಂಧ ಇಲ್ಲ. 40 ಪರ್ಸೆಂಟ್ ಸರ್ಕಾರ ಸುಳ್ಳು ಹೇಳಿ ಚುನಾವಣೆ ನಡೆಸಲು ಮುಂದಾಗಿದ್ದು, ಇದು ಅವರ ವೈಫಲ್ಯವನ್ನು ತೋರಿಸುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.