ಶ್ರೀನಗರ: ಜಮ್ಮು–ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಮಸೀದಿಯೊಂದರಲ್ಲಿ ‘ಆಜಾನ್’ ಕೂಗುತ್ತಿದ್ದ ಧರ್ಮಗುರು, ನಿವೃತ್ತ ಪೊಲೀಸ್ ಅಧಿಕಾರಿ (ಎಸ್ಪಿ) ಯೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
‘ಮೊಹಮ್ಮದ್ ಶಫಿ ಮಿರ್ (72) ಅವರನ್ನು ಉತ್ತರ ಕಾಶ್ಮೀರದ ಶೀರಿ ಪ್ರದೇಶದ ಮಸೀದಿಯೊಳಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಮಿರ್ ಅವರು 2012ರಲ್ಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯಿಂದ ನಿವೃತ್ತಿ ಪಡೆದಿದ್ದರು’ ಎಂದು ಹೇಳಿದರು.
‘ಮುಂಜಾನೆ ‘ಆಜಾನ್’ ಕೂಗುವುದು ಧ್ವನಿವರ್ಧಕದ ಮೂಲಕ ಕೇಳಿಸುತ್ತಿತ್ತು. ಆದರೆ ಹಠಾತ್ ಅದರ ಸದ್ದು ನಿಂತಿತು. ‘ಕ್ಷಮಿಸು’ ಎಂಬುದು ಮಿರ್ ಅವರ ಕೊನೆಯ ಪದವಾಗಿತ್ತು’ ಎಂದು ಅವರ ಸೋದರ ಸಂಬಂಧಿ ಮಹಮ್ಮದ್ ಮುಸ್ತಾಫಾ ಹೇಳಿದರು.