ಲತೇಹಾರ್ (ಜಾರ್ಖಂಡ್): ಜಾರ್ಜಂಡ್ನ ಲತೇಹಾರ್ ಜಿಲ್ಲೆಯ ರೈಲ್ವೆ ನಿರ್ಮಾಣ ಪ್ರದೇಶದಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಸದಸ್ಯರು ಕನಿಷ್ಠ ನಾಲ್ಕು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಖಾಸಗಿ ಸಂಸ್ಥೆಯ ಉದ್ಯೋಗಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದ್ವಾಬದ ಚಟ್ಟಿ ನದಿಯ ಸೇತುವೆ ಸಮೀಪ ಸೋಮವಾರ ಸಂಜೆ ಈ ಘಟನೆ ನಡೆದಿದೆ.
ಮಾವೋವಾದಿಗಳ ಗುಂಪೊಂದು ಮೂರು ಭಾರಿ ವಾಹನಗಳು ಹಾಗೂ ಒಂದು ಕಾರಿಗೆ ಬೆಂಕಿ ಹಚ್ಚಿ, ಉದ್ಯೋಗಿಗಳನ್ನು ಥಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಘಟನೆ ನಡೆಯುವ ಸರಿಯಾಗಿ ಒಂದು ತಿಂಗಳ ಹಿಂದಷ್ಟೇ ಮಾವೋವಾದಿಗಳು ಪಲಾಮು ಜಿಲ್ಲೆಯಲ್ಲಿ ಆರು ವಾಹನಗಳಿಗೆ ಬೆಂಕಿ ಹಚ್ಚಿ, ಇಬ್ಬರು ಉದ್ಯೋಗಿಗಳಿಗೆ ಥಳಿಸಿದ್ದರು.